ನವದೆಹಲಿ: ಆಯುಷ್ಮಾನ್ ಭಾರತ್ ಯೋಜನೆಯಡಿ ಫಲಾನುಭವಿಗಳು ಆರೋಗ್ಯ ವಿಮೆ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ.
ಫಲಾನುಭವಿಗಳು ಆಧಾರ್ ಕಾರ್ಡ್ ಇಲ್ಲದೆ ಒಮ್ಮೆ ಮಾತ್ರ ಸೌಲಭ್ಯ ಪಡೆಯಬಹುದೆನ್ನುವ ನಿಬಂಧನೆ ‘ಆಯುಷ್ಮಾನ್ ಭಾರತ್’ ಯೋಜನೆಯ ಮಾರ್ಗಸೂಚಿಯಲ್ಲಿದೆ. ಸಚಿವಾಲಯ ತೆಗೆದುಕೊಂಡಿರುವ ಈ ತೀರ್ಮಾನ ಈಗ ಯೋಜನೆಯ ಮಾರ್ಗಸೂಚಿಗೆ ತದ್ವಿರುದ್ಧವಾದಂತಾಗಿದೆ.
ಬಡವರು ಮತ್ತು ದುರ್ಬಲ ವರ್ಗದವರು ಆಧಾರ್ ಕಾರ್ಡ್ ಇಲ್ಲದೆ ಒಮ್ಮೆ ಮಾತ್ರ ಸೌಲಭ್ಯ ಪಡೆಯಬಹುದು ಎಂದು ಸಚಿವಾಲಯ ಹೇಳುವುದಿಲ್ಲ. ಎರಡನೇ ಬಾರಿ ಸೌಲಭ್ಯ ಪಡೆಯುವಾಗ ಆಧಾರ್ ಕಾರ್ಡ್ ಅಥವಾ ಆಧಾರ್ ನೋಂದಣಿ ಮಾಡಿಸಿದ ಚೀಟಿಯನ್ನು ಹಾಜರುಪಡಿಸಿದರೂ ಅವರಿಗೆ ವಿಮಾ ಸೌಲಭ್ಯ ಒದಗಿಸಲಾಗುವುದು. ಆಧಾರ್ ಕಾರ್ಡ್ ಇಲ್ಲದವರು ಸರ್ಕಾರ ನೀಡಿರುವ ಯಾವುದೇ ರೀತಿಯ ಗುರುತಿನ ಚೀಟಿ ಹಾಜರುಪಡಿಸಿ ಸೌಲಭ್ಯ ಪಡೆಯಬಹುದು ಎಂದು ಹೇಳಿದೆ.
ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಫಲಾನುಭವಿ ಆಧಾರ್ ಕಾರ್ಡ್ ಅಥವಾ ಜಮೀನು ದಾಖಲೆ ಹೊಂದಿಲ್ಲದೆ ಇದ್ದರೆ, ಇಲ್ಲವೆಂದು ಘೋಷಣಾ ಪತ್ರಕ್ಕೆ ಸಹಿ ತೆಗೆದುಕೊಳ್ಳಲಾಗುತ್ತದೆ. ಎರಡನೇ ಬಾರಿ ಚಿಕಿತ್ಸೆಗೆ ಬರುವಾಗ ಆಧಾರ್ ಕಾರ್ಡ್ ಅಥವಾ ಆಧಾರ್ ನೋಂದಣಿ ಚೀಟಿ ಹಾಜರುಪಡಿಸಬೇಕಾಗುತ್ತದೆ ಎನ್ನುವ ನಿಯಮ ಯೋಜನೆಯ ಮಾರ್ಗಸೂಚಿಯಲ್ಲಿತ್ತು. ಈ ಯೋಜನೆಯಡಿ 10.74 ಕೋಟಿ ಬಡ ಮತ್ತು ದುರ್ಬಲ ವರ್ಗದ ಕುಟುಂಬಗಳು ತಲಾ ₹5 ಲಕ್ಷದವರೆಗೆ ಆರೋಗ್ಯ ವಿಮೆ ಪಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.