ನವದೆಹಲಿ: ಯೋಗ ಗುರು ಬಾಬಾರಾಮದೇವ್ ಅವರು ಇತ್ತೀಚೆಗೆ ಹಮ್ದರ್ದ್ ಅವರ ಪಾನೀಯದ ಕುರಿತು ‘ಶರಬತ್ ಜಿಹಾದ್’ ಎಂದು ಹೇಳಿದ್ದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್, ‘ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ತಂದಿದೆ’ ಎಂದು ಹೇಳಿದೆ.
ಹಮ್ದರ್ದ್ ನ್ಯಾಷನಲ್ ಫೌಂಡೇಶನ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್, ‘ಬಾಬಾ ರಾಮ್ದೇವ್ ಅವರ ಹೇಳಿಕೆ ಅಸಮರ್ಥನೀಯವಾಗಿದೆ. ನಿಮ್ಮ ಕಕ್ಷಿದಾರರಿಗೆ ಹೇಳಿಕೆ ಬಗ್ಗೆ ಗಮನವಿಟ್ಟುಕೊಳ್ಳಲು ಹೇಳಿ, ಇಲ್ಲದಿದ್ದರೆ ಬಲವಾದ ಆದೇಶ ಬರುತ್ತದೆ’ ಎಂದು ರಾಮ್ದೇವ್ ಪರ ವಕೀಲರಿಗೆ ಕೋರ್ಟ್ ಎಚ್ಚರಿಸಿದೆ.
ಪತಂಜಲಿ ಗುಲಾಬ್ ಶರಬತ್ ಪ್ರಚಾರದ ವೇಳೆ, ಹಮ್ದರ್ದ್ ಅವರು ರೂಹ್ ಅಫ್ಜಾದಿಂದ (ಶರಬತ್) ಗಳಿಸಿದ ಹಣ ಮದರಸಾಗಳು ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಕೆಯಾಗಿದೆ ಎಂದು ರಾಮ್ದೇವ್ ಹೇಳಿದ್ದರು. ನಂತರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು, ಯಾವುದೇ ಬ್ರ್ಯಾಂಡ್ ಅಥವಾ ಸಮುದಾಯವನ್ನು ಉದ್ದೇಶಿಸಿ ಹೇಳಿಲ್ಲ ಎಂದಿದ್ದರು.
ಹಮ್ದರ್ದ್ ಪರ ವಿಚಾರಣೆಗೆ ಹಾಜರಾದ ಹಿರಿಯ ವಕೀಲ ಮುಕುಲ್ ರೊಹಟಿಗೆ ಅವರು, ‘ಇದು ಸಮುದಾಯದ ನಡುವೆ ಬಿರುಕು ಸೃಷ್ಟಿಸುವ ಪ್ರಕರಣವಾಗಿದೆ. ದ್ವೇಷ ಭಾಷಣವಾಗಿದೆ. ರಾಮ್ದೇವ್ ಅವರು ‘ಇದು ಶರಬತ್ ಜಿಹಾದ್’ ಎಂದು ಹೇಳಿದ್ದರು. ಅವರು ಅವರ ಉದ್ಯಮ ನೋಡಿಕೊಳ್ಳಲಿ, ನಮಗೇಕೆ ತೊಂದರೆ ಕೊಡುತ್ತಿದ್ದಾರೆ ಎಂದು ವಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.