ADVERTISEMENT

ಅಲೋಪಥಿ ವಿರುದ್ಧ ರಾಮ್‌ದೇವ್‌ ಹೇಳಿಕೆ: ನಿವಾಸಿ ವೈದ್ಯರ ಸಂಘಗಳ ಒಕ್ಕೂಟ ಪ್ರತಿಭಟನೆ

ಪಿಟಿಐ
Published 1 ಜೂನ್ 2021, 6:54 IST
Last Updated 1 ಜೂನ್ 2021, 6:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಅಲೋಪಥಿ ವೈದ್ಯಕೀಯ ಪದ್ಧತಿ ಕುರಿತು ಯೋಗ ಗುರು ರಾಮದೇವ್ ನೀಡಿರುವ ಹೇಳಿಕೆ ವಿರೋಧಿಸಿ ನಿವಾಸಿ ವೈದ್ಯರ ಸಂಘಗಳ ಒಕ್ಕೂಟ (ಫೋರ್ಡಾ) ಮಂಗಳವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭಿಸಿದೆ.

‘ರಾಮ್‌ದೇವ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು. ಇಲ್ಲವೇ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒಕ್ಕೂಟದ ಸದಸ್ಯರು ಒತ್ತಾಯಿಸಿ ದೇಶದಾದ್ಯಂತ ಪ್ರತಿಭಟನೆ ಆರಂಭಿಸಿದ್ದಾರೆ. ಆದರೆ ವೈದ್ಯಕೀಯ ಸೇವೆಗೆ ಯಾವುದೇ ಧಕ್ಕೆ ಒದಗದ ರೀತಿಯಲ್ಲಿ ಕಪ‍್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

‘ಅಲೋಪಥಿ ವೈದ್ಯಕೀಯ ಪದ್ಧತಿ ಕುರಿತು ಮಾತನಾಡಲು ಅರ್ಹತೆ ಇಲ್ಲದ ರಾಮದೇವ್, ಆ ಪದ್ಧತಿ ವಿರುದ್ಧ ಟೀಕೆ ಮಾಡಿದ್ದಾರೆ. ಅವರ ಟೀಕೆಗಳ ವಿರುದ್ಧ ನಾವು ಇಂದು ‌ಪ್ರತಿಭಟನೆ ಆರಂಭಿಸಿದ್ದೇವೆ‘ ಎಂದು ಸಂಘಟನೆಯ ಹಿರಿಯ ಸದಸ್ಯರೊಬ್ಬರು ತಿಳಿಸಿದರು.

ADVERTISEMENT

‘ಕೋವಿಡ್‌ 19 ಸಾಂಕ್ರಾಮಿಕವಿರುವ ಈ ದಿನಗಳಲ್ಲಿ ಇಂಥ ಹೇಳಿಕೆಗಳು ತಮ್ಮ ಜೀವ ಪಣಕ್ಕಿಟ್ಟು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಮನೋಸ್ಥೈರ್ಯದ ಮೇಲೆ ತೀವ್ರ ಪರಿಣಾಮಬೀರಿವೆ. ಆದ್ದರಿಂದ, ರಾಮ್‌ದೇವ್‌ ತಮ್ಮ ಹೇಳಿಕೆಗೆ ಬೇಷರತ್ತಾಗಿ ಸಾರ್ವಜನಿಕ ಕ್ಷಮೆಯಾಚಿಸಬೇಕು ಅಥವಾ ಸರ್ಕಾರ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ‘ ಎಂದು ಒಕ್ಕೂಟದ ಸದಸ್ಯರೊಬ್ಬರು ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ ಆರಂಭವಾಗಿರುವ ಈ ಪ್ರತಿಭಟನೆಗೆ ಈಗಾಗಲೇ ಸಫ್ದರ್‌ಜಂಗ್‌ ಆಸ್ಪತ್ರೆಯ ನಿವಾಸಿ ವೈದ್ಯರ ಸಂಘದ ಸದಸ್ಯರು ಕೈ ಜೋಡಿಸಿದ್ದಾರೆ. ನಂತರದಲ್ಲಿ ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಹಿಂದೂ ರಾವ್‌ ಆಸ್ಪತ್ರೆ, ಸಂಜಯ್‌ ಗಾಂಧಿ ಸ್ಮಾರಕ ಆಸ್ಪತ್ರೆ, ಬಿ.ಆರ್‌ ಅಂಬೇಡ್ಕರ್ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಯ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಅಧಿಕೃತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.