ಉತ್ತರ ಪ್ರದೇಶದ ಸಂಭಲ್ ನಗರದಲ್ಲಿ ಹಿಂಸಾಚಾರ ವೇಳೆ ದುಷ್ಕರ್ಮಿಗಳು ವಾಹನಗಳಿಗೆ ಬೆಂಕಿ ಹಚ್ಚಿದ್ದರು
ಪಿಟಿಐ ಚಿತ್ರ
ಲಖನೌ/ ಸಂಭಲ್: ಹಿಂಸಾಚಾರ ಪೀಡಿತ ಸಂಭಲ್ಗೆ ಹೊರಗಿನವರ ಪ್ರವೇಶವನ್ನು ಡಿಸೆಂಬರ್ 10ರವರೆಗೆ ನಿರ್ಬಂಧಿಸಿ ಅಲ್ಲಿನ ಜಿಲ್ಲಾಡಳಿತ ಆದೇಶಿಸಿದೆ.
ಶಾಂತಿ ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವ ಉದ್ದೇಶದಿಂದ ನಿರ್ಬಂಧವನ್ನು ವಿಸ್ತರಿಸಲಾಗಿದೆ ಎಂದು ಅದು ಹೇಳಿದೆ. ಈ ಹಿಂದೆ ವಿಧಿಸಲಾಗಿದ್ದ ನಿರ್ಬಂಧ ಶನಿವಾರಕ್ಕೆ ಕೊನೆಯಾಗಿತ್ತು.
ನಿರ್ಬಂಧ ವಿಸ್ತರಣೆಯಿಂದಾಗಿ ಸಂಭಲ್ನ ಸಂಸದ ಸೇರಿದಂತೆ ಸಮಾಜವಾದಿ ಪಕ್ಷದ ಮೂವರು ಸಂಸದರಿಗೆ ಸಂಭಲ್ ಪ್ರವೇಶಿಸಲು ಶನಿವಾರ ಸಾಧ್ಯವಾಗಲಿಲ್ಲ. ಅವರನ್ನು ಹಿಂಸಾಚಾರ ಪೀಡಿತ ನಗರಕ್ಕೆ ಬಾರದಂತೆ ತಡೆಯಲಾಯಿತು.
ಸಮಾಜವಾದಿ ಪಕ್ಷದ ಮುಜಾಫರ್ನಗರದ ಸಂಸದ ಹರೇಂದ್ರ ಮಲಿಕ್ ಅವರು ಕೈರಾನಾ ಮತ್ತು ಸಂಭಲ್ ಸಂಸದರ ಜತೆಗೆ ಗಾಜಿಯಾಬಾದ್ ಕಡೆಯಿಂದ ಸಂಭಲ್ ಪ್ರವೇಶಿಸುತ್ತಿದ್ದರು. ಆದರೆ, ಅವರನ್ನು ತಡೆಹಿಡಿಯಲಾಯಿತು.
‘ನಮ್ಮನ್ನು ಹೀಗೇಕೆ ತಡೆಯಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ವಿರೋಧ ಪಕ್ಷದ ನಾಯಕರು ಮತ್ತು ಸಂಸದರನ್ನು ಅಲ್ಲಿಗೆ ಹೋಗಲು ಏಕೆ ಬಿಡುತ್ತಿಲ್ಲ’ ಎಂದು ಮಲಿಕ್ ಪ್ರಶ್ನಿಸಿದರು.
ಶಾಹಿ ಜಾಮಾ ಮಸೀದಿಯ ಸಮೀಕ್ಷೆ ವಿರೋಧಿಸಿ ನಡೆದ ಹಿಂಸಾಚಾರದ ಕುರಿತು ಮಾಹಿತಿ ಸಂಗ್ರಹಿಸಲು 15 ಸದಸ್ಯರ ನಿಯೋಗ ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಸಮಾಜವಾದಿ ಪಕ್ಷ ಈ ಹಿಂದೆ ಘೋಷಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.