
ಮೌಲಾನಾ ಅರ್ಷದ್ ಮದನಿ
-ಪಿಟಿಐ ಚಿತ್ರ
ನವದೆಹಲಿ: ಬಾಂಗ್ಲಾದೇಶದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿರುವುದನ್ನು ಜಮಿಯತ್ ಉಲಮಾ-ಎ-ಹಿಂದ್ ತೀವ್ರವಾಗಿ ಖಂಡಿಸಿದೆ. ಇದು ‘ಕ್ರೌರ್ಯದ ಪರಮಾವಧಿ’ಯಾಗಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದೆ.
‘ನೆರೆಯ ದೇಶದಲ್ಲಿ (ಬಾಂಗ್ಲಾ) ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ವಿರುದ್ಧದ ದೌರ್ಜನ್ಯಗಳು ತುಂಬಾ ದುರದೃಷ್ಟಕರ. ಇಂತಹ ಘಟನೆಗಳು ಇಸ್ಲಾಂನ ಬೋಧನೆಗಳಿಗೆ ವಿರುದ್ಧವಾಗಿರುವುದಲ್ಲದೆ ಧರ್ಮಕ್ಕೂ ಅಪಮಾನವನ್ನುಂಟು ಮಾಡುತ್ತವೆ. ಆದ್ದರಿಂದ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಜಮಿಯತ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ಒತ್ತಾಯಿಸಿದ್ದಾರೆ.
‘ಯಾವುದೇ ವ್ಯಕ್ತಿಯನ್ನು ಕ್ರೂರವಾಗಿ ಹತ್ಯೆ ಮಾಡುವುದೆಂದರೇ ಅದನ್ನು ಕೇವಲ ಕೊಲೆ ಎಂದಷ್ಟೇ ಕರೆಯಲಾಗದು. ಬದಲಾಗಿ, ಅದು ಕ್ರೌರ್ಯದ ಪರಮಾವಧಿಯಾಗುತ್ತದೆ. ಇಂತಹ ಕೃತ್ಯಗಳನ್ನು ಎಷ್ಟೇ ಖಂಡಿಸಿದರೂ ಸಾಲದು’ ಎಂದೂ ಮದನಿ ಬೇಸರ ಹೊರಹಾಕಿದ್ದಾರೆ.
‘ಕೆಲವರು ಅಧಿಕಾರಕ್ಕಾಗಿ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದು ಧಾರ್ಮಿಕ ಮತಾಂಧತೆಯ ಅಪಾಯಕಾರಿ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇದರಿಂದ ಎಲ್ಲೆಡೆ ಅಲ್ಪಸಂಖ್ಯಾತರು ಅಸುರಕ್ಷಿತರು ಎಂಬ ಭಾವನೆ ಮೂಡುತ್ತದೆ’ ಎಂದಿದ್ದಾರೆ.
‘ಪ್ರತಿಯೊಬ್ಬರು ತಮ್ಮ ಧರ್ಮ ಮತ್ತು ಅದರ ಬೋಧನೆಗಳನ್ನು ಪ್ರಾಮಾಣಿಕವಾಗಿ ಅನುಸರಿಸಬೇಕು. ಆದಾಗ್ಯೂ, ಮತಾಂಧತೆ ನುಸುಳಿದಾಗ ಜನರು ಇತರ ಧರ್ಮಗಳನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲು ಮುಂದಾಗುತ್ತಾರೆ. ಇದು ಸಂಘರ್ಷಕ್ಕೆ ಕಾರಣವಾಗುತ್ತದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಯ ಬಗ್ಗೆ ಆಕ್ರೋಶ ವ್ಯಕ್ತವಾದಷ್ಟು ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುವ ಹಿಂಸಾಚಾರ ಮತ್ತು ಗುಂಪು ಹತ್ಯೆಯ ವಿಷಯಕ್ಕೆ ಬಂದಾಗ ಕಂಡು ಬರುವುದಿಲ್ಲ ಎಂದಿದ್ದಾರೆ.
ಈ ತಿಂಗಳ ಆರಂಭದಲ್ಲಿ ಬಾಂಗ್ಲಾದೇಶದ ಮೈಮೆನ್ಶಿಂಘೋ ನಗರದಲ್ಲಿ ಹಿಂದೂ ದೇವರುಗಳನ್ನು ನಿಂದಿಸಿ, ದೀಪು ಚಂದ್ರ ದಾಸ್ ಎಂಬ ವ್ಯಕ್ತಿಯ ಮೇಲೆ ಗುಂಪು ಹಲ್ಲೆ ನಡೆಸಲಾಗಿತ್ತು. ಬಳಿಕ, ಆತನ ದೇಹವನ್ನು ಮರಕ್ಕೆ ನೇತುಹಾಕಿ, ಬೆಂಕಿ ಹಚ್ಚಲಾಗಿತ್ತು. ಪ್ರಕರಣ ಸಂಬಂಧ ಇದುವರೆಗೆ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.