ADVERTISEMENT

ನ್ಯಾ. ಯಶವಂತ ವರ್ಮಾ ವರ್ಗಾವಣೆ ವಿರೋಧಿಸಿ ಹಲವು ಬಾರ್‌ಗಳಿಂದ ಸಿಜೆಐಗೆ ಮನವಿ

ಪಿಟಿಐ
Published 27 ಮಾರ್ಚ್ 2025, 10:13 IST
Last Updated 27 ಮಾರ್ಚ್ 2025, 10:13 IST
<div class="paragraphs"><p>ಅಲಹಾಬಾದ್ ಹೈಕೋರ್ಟ್‌ ಹಾಗೂ  ನ್ಯಾಯಮೂರ್ತಿ ಯಶವಂತ ವರ್ಮಾ</p></div>

ಅಲಹಾಬಾದ್ ಹೈಕೋರ್ಟ್‌ ಹಾಗೂ ನ್ಯಾಯಮೂರ್ತಿ ಯಶವಂತ ವರ್ಮಾ

   

– ಪಿಟಿಐ ಚಿತ್ರಗಳು

ನವದೆಹಲಿ: ನ್ಯಾಯಮೂರ್ತಿ ಯಶವಂತ ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡುವ ಕೊಲಿಜಿಯಂ ಶಿಫಾರಸನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಹಲವು ಬಾರ್‌ ಸಂಘಟನೆಗಳು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಅವರಿಗೆ ಮನವಿ ಮಾಡಿವೆ.

ADVERTISEMENT

ಅಲಹಾಬಾದ್, ಗುಜರಾತ್‌, ಕೇರಳ, ಜಬಲಪುರ, ಕರ್ನಾಟಕ ಹಾಗೂ ಲಖನೌ ಹೈಕೋರ್ಟ್‌ನ ಬಾರ್‌ ಸಂಘಗಳು ಸಿಜೆಐ ಕಚೇರಿಗೆ ಮನವಿ ಸಲ್ಲಿಸಿವೆ.

ತಮ್ಮ ಅಧಿಕೃತ ಮನೆಯಲ್ಲಿ ಬೆಂಕಿ ಅವಘಡದ ವೇಳೆ ಸುಟ್ಟ ಸ್ಥಿತಿಯಲ್ಲಿ ಹಣ ಲಭಿಸಿದ ಪ್ರಕರಣದಲ್ಲಿ ನ್ಯಾಯಮೂರ್ತಿ ವರ್ಮಾ ಅವರು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ ಎನ್ನುವುದನ್ನೂ ಮನವಿಯಲ್ಲಿ ಉಲ್ಲೇಖಿಸಿಲಾಗಿದೆ.

ಅಲ್ಲದೆ ಘಟನೆ ಸಂಬಂಧ ಎಫ್‌ಐಆರ್ ದಾಖಲು ಮಾಡದಿರುವುದನ್ನೂ ಬಾರ್‌ ಸಂಘಗಳು ಪ್ರಶ್ನಿಸಿವೆ.

ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ವರ್ಗಾವಣೆ ಪ್ರಸ್ತಾವನೆಯನ್ನು ವಿರೋಧಿಸಿ ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಷನ್ ​​ಮಾರ್ಚ್ 25 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದೆ.

ಪ್ರಕರಣದ ಹಿನ್ನಲೆ

ಮಾರ್ಚ್ 14 ರಂದು ರಾತ್ರಿ 11.35 ರ ಸುಮಾರಿಗೆ ನ್ಯಾಯಮೂರ್ತಿ ವರ್ಮಾ ಅವರ ಲುಟಿಯೆನ್ಸ್ ದೆಹಲಿ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಅಧಿಕಾರಿಗಳಿಗೆ ನಗದು ಇರುವುದು ಪತ್ತೆಯಾಗಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ವಿವಾದದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಶಿಫಾರಸು ಮಾಡಿತ್ತು.

ಮಾರ್ಚ್ 22 ರಂದು, ಆರೋಪಗಳ ಬಗ್ಗೆ ಆಂತರಿಕ ತನಿಖೆ ನಡೆಸಲು ಸಿಜೆಐ ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದರು. ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ಕೆ ಉಪಾಧ್ಯಾಯ ಅವರು ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದರು. ಆ ವಿಚಾರಣಾ ವರದಿಯನ್ನು ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು.

ನ್ಯಾಯಮೂರ್ತಿ ವರ್ಮಾ ಆರೋಪಗಳನ್ನು ನಿರಾಕರಿಸಿದ್ದು, ತಾವು ಅಥವಾ ಅವರ ಕುಟುಂಬ ಸದಸ್ಯರು ಯಾವುದೇ ಹಣವನ್ನು ಇಟ್ಟುಕೊಂಡಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.