ಐಜ್ವಾಲ್: ವಿರೋಧ ಪಕ್ಷಗಳ ಪ್ರತಿಭಟನೆ ನಡುವೆಯೂ ಮಿಜೋರಾಂ ವಿಧಾನಸಭೆಯಲ್ಲಿ ಬುಧವಾರ ‘ಭಿಕ್ಷಾಟನೆ ನಿಷೇಧ ಮಸೂದೆ–2025’ಯನ್ನು ಅಂಗೀಕರಿಸಲಾಗಿದೆ.
ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಾಲ್ರಿನ್ಪುಯಿ ಅವರು ವಿಧಾನಸಭೆಯಲ್ಲಿ ಭಿಕ್ಷಾಟನೆ ನಿಷೇಧ ಮಸೂದೆ ಮಂಡಿಸಿದ್ದಾರೆ.
‘ರಾಜ್ಯದಲ್ಲಿ ಭಿಕ್ಷಾಟನೆಯನ್ನು ನಿಷೇಧಿಸುವುದು ಮಾತ್ರವಲ್ಲದೆ, ಸುಸ್ಥಿರ ಜೀವನೋಪಾಯದ ಆಯ್ಕೆಗಳನ್ನು ಕಲ್ಪಿಸುವ ಮೂಲಕ ನೆರವು ಒದಗಿಸುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ’ ಎಂದು ಅವರು ಹೇಳಿದ್ದಾರೆ.
‘ರಾಜ್ಯದಲ್ಲಿ ಭಿಕ್ಷಾಟನೆ ಹೆಚ್ಚುತ್ತಿದೆ ಎಂಬ ಕಳವಳವಿದೆ. ಆದರೆ, ಚರ್ಚ್ಗಳು ಮತ್ತು ಎನ್ಜಿಒಗಳ ಒಳಗೊಳ್ಳುವಿಕೆ ಮತ್ತು ಸರ್ಕಾರದ ಕಲ್ಯಾಣ ಕ್ರಮಗಳಿಂದಾಗಿ ಭಿಕ್ಷುಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದು ಸಮಾಧಾನಕಾರ ಸಂಗತಿ’ ಎಂದು ಅವರು ತಿಳಿಸಿದ್ದಾರೆ.
‘ರೈಲುಗಳ ಮೂಲಕ ಹೊರರಾಜ್ಯಗಳಿಂದ ಭಿಕ್ಷುಕರ ರಾಜ್ಯಕ್ಕೆ ಬರುತ್ತಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿರುವ ಅವರು, ಭಿಕ್ಷುಕರನ್ನು ಮೊದಲು ಶಿಬಿರಗಳಲ್ಲಿ ಇರಿಸಲಾಗುತ್ತದೆ. ಬಳಿಕ ಅವರನ್ನು ಮನೆಗಳಿಗೆ ಅಥವಾ ರಾಜ್ಯಗಳಿಗೆ ಕಳುಹಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಈ ಮಸೂದೆಯು ಕ್ರಿಶ್ಚಿಯನ್ ನಂಬಿಕೆಗೆ ಹಾನಿಕಾರಕವಾಗಿದ್ದು, ರಾಜ್ಯಕ್ಕೆ ಕೆಟ್ಟ ಹೆಸರು ತರುತ್ತದೆ’ ಎಂದು ಎಂಎನ್ಎಫ್ ನಾಯಕ ಲಾಲ್ಚಂದಮ ರಾಲ್ಟೆ ಸೇರಿದಂತೆ ವಿರೋಧ ಪಕ್ಷದ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
‘ರಾಜ್ಯವನ್ನು ಭಿಕ್ಷಾಟನೆಯಿಂದ ಮುಕ್ತಗೊಳಿಸಲು ಸರ್ಕಾರ, ಎನ್ಜಿಒಗಳು ಮತ್ತು ಚರ್ಚ್ಗಳ ಸಾಮೂಹಿಕ ಭಾಗವಹಿಸುವಿಕೆಯಿಂದಾಗಿ ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸುವುದು ಮಸೂದೆಯ ಮುಖ್ಯ ಉದ್ದೇಶವಾಗಿದೆ’ ಎಂದು ಮುಖ್ಯಮಂತ್ರಿ ಲಾಲ್ದುಹೋಮ ಅಭಿಪ್ರಾಯಪಟ್ಟಿದ್ದಾರೆ.
ಸುದೀರ್ಘ ಚರ್ಚೆಯ ಬಳಿಕ ಮಿಜೋರಾಂ ವಿಧಾನಸಭೆಯಲ್ಲಿ ಭಿಕ್ಷಾಟನೆ ನಿಷೇಧ ಮಸೂದೆಯನ್ನು ಅಂಗೀಕರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.