ADVERTISEMENT

ಪಂಜಾಬ್ ಎಜಿ ರಾಜೀನಾಮೆ ಅಂಗೀಕಾರ: ಸಿಧು ಪ್ರಮುಖ ಬೇಡಿಕೆ ಈಡೇರಿಸಿದ ಚನ್ನಿ

ಪಿಟಿಐ
Published 9 ನವೆಂಬರ್ 2021, 14:14 IST
Last Updated 9 ನವೆಂಬರ್ 2021, 14:14 IST
ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು, ಪಂಜಾಬ್ ಸಿಎಂ ಚರಣ್‌ಜಿತ್ ಚನ್ನಿ: ಪಿಟಿಐ ಚಿತ್ರ
ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು, ಪಂಜಾಬ್ ಸಿಎಂ ಚರಣ್‌ಜಿತ್ ಚನ್ನಿ: ಪಿಟಿಐ ಚಿತ್ರ   

ಚಂಡೀಗಡ: ಪಂಜಾಬ್ ರಾಜ್ಯದ ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಮುಖ್ಯಮಂತ್ರಿ ಚರಣ್‌ಜಿತ್ ಚನ್ನಿ ಘೋಷಿಸಿದ್ದು, ನವಜೋತ್ ಸಿಂಗ್ ಸಿಧು ಅವರ ಪ್ರಮುಖ ಬೇಡಿಕೆಯನ್ನು ಈಡೇರಿಸಿದ್ದಾರೆ.

ಅಡ್ವೊಕೇಟ್ ಜನರಲ್ ಡಿಯೋಲ್ ನೇಮಕವನ್ನು ಹಿಂದಿನಿಂದಲೂ ಸಿಧು ವಿರೋಧಿಸುತ್ತಲೇ ಬಂದಿದ್ಧರು. 2015ರ ಸಿಖ್ ಧರ್ಮಗ್ರಂಥಕ್ಕೆ ಅವಮಾನ ಪ್ರಕರಣದ ನಂತರ ನಡೆದ ಪೊಲೀಸರ ಗುಂಡಿನ ಪ್ರಕರಣಗಳಲ್ಲಿ ಮಾಜಿ ಡಿಜಿಪಿ ಸುಮೇಧ್ ಸಿಂಗ್ ಸೈನಿ ಪರ ಡಿಯೋಲ್ ವಕಾಲತ್ತು ವಹಿಸಿದ್ದರು.

ರಾಜೀನಾಮೆ ನೀಡಿ ಒಂದು ತಿಂಗಳ ಬಳಿಕ ಹಿಂಪಡೆದ ಸಿಧು, ಅಡ್ವೊಕೇಟ್ ಜನರಲ್ ಅವರನ್ನು ಬದಲಾಯಿಸಿದರೆ ಮಾತ್ರ ತಮ್ಮ ಜವಾಬ್ದಾರಿ ಮುಂದುವರಿಸುವುದಾಗಿ ಷರತ್ತು ಹಾಕಿದ್ದರು.

ADVERTISEMENT

ಈ ಮಧ್ಯೆ, ರಾಜಕೀಯ ಲಾಭಕ್ಕಾಗಿ ತಪ್ಪು ಮಾಹಿತಿ ಹರಡುವ ಮೂಲಕ ರಾಜ್ಯ ಸರ್ಕಾರ ಮತ್ತು ತಮ್ಮ ಕೆಲಸಕ್ಕೆ ಸಿಧು ಅಡ್ಡಿ ಮಾಡುತ್ತಿದ್ದಾರೆ ಎಂದು ಡಿಯೋಲ್ ಶನಿವಾರ ಆರೋಪಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ನವಜೋತ್ ಸಿಂಗ್ ಸಿಧು, ‘ನ್ಯಾಯವು ಕುರುಡಾಗಿರಬಹುದು. ಆದರೆ ಪಂಜಾಬ್ ಜನರು ಕುರುಡರಲ್ಲ’ಎಂದು ಹೇಳಿದ್ದರು.

‘ಪಂಜಾಬ್ ರಾಜ್ಯದ ಎಜಿಯವರೇ, ನ್ಯಾಯವು ಕುರುಡು, ಪಂಜಾಬ್ ರಾಜ್ಯದ ಜನರು ಕುರುಡರಲ್ಲ. ಧರ್ಮಗ್ರಂಥ ಅವಮಾನ ಪ್ರಕರಣಗಳಲ್ಲಿ ನ್ಯಾಯ ಒದಗಿಸುವ ಆಶ್ವಾಸನೆ ಕೊಟ್ಟು ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಅದೇ ಪ್ರಕರಣಗಳ ಸಂಚುಕೋರರು ಮತ್ತು ಆರೋಪಿಗಳು ಹಾಗೂ ನಮ್ಮ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದವರ ಪರ ನೀವು ವಕಾಲತ್ತು ವಹಿಸಿದ್ದೀರಿ’ ಎಂದು ಸಿಧು ಟ್ವೀಟ್‌ನಲ್ಲಿ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.