ಕೋಲ್ಕತ್ತ: 'ಪಶ್ಚಿಮ ಬಂಗಾಳದ ಜನ ಬಿಜೆಪಿ ವಿರುದ್ಧದ ಏಕೈಕ ಶಕ್ತಿಯಾಗಿ ಟಿಎಂಸಿಯನ್ನು ಆಯ್ಕೆ ಮಾಡಿಕೊಂಡರು. ಆದರೆ, ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆ ವಿಚಾರವನ್ನು ಮರೆತರು,' ಎಂದು ಸಿಪಿಐಎಂ ಅಭಿಪ್ರಾಯಪಟ್ಟಿದೆ.
ಇತ್ತೀಚೆಗೆ ಪೂರ್ಣಗೊಂಡ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣವಾಗಿ ನೆಲಕಚ್ಚಿರುವ ಸಿಪಿಎಂ, ಸೋಲಿನ ಕುರಿತು ಭಾನುವಾರ ಮಾತನಾಡಿದೆ. ಎಡಪಂಥೀಯ, ಕಾಂಗ್ರೆಸ್ ಮತ್ತು ಐಎಸ್ಎಫ್ ಒಳಗೊಂಡ ಸಂಯುಕ್ತ ಮೋರ್ಚಾ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದೆ. ಒಕ್ಕೂಟವು ಮತದಾರರ ಮನ್ನಣೆ ಗಳಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದೆ.
'ರಾಜಕೀಯ ಮತ್ತು ಸಂಘಟನಾತ್ಮಕ ಕಾರಣಗಳಿಂದ ನಮ್ಮ ಮೈತ್ರಿಕೂಟಕ್ಕೆ ಸೋಲಾಗಿದೆ. ರಾಜ್ಯದ ಜನರಿಗೆ ನಮ್ಮ ಕೂಟದ ನೀತಿಗಳ ಬಗ್ಗೆ ವಿಶ್ವಾಸವಿರಲಿಲ್ಲ. ಪರ್ಯಾಯ ಸರ್ಕಾರ ರಚಿಸುವ ನಮ್ಮ ಪ್ರಯತ್ನವನ್ನು ಜನ ತಿರಸ್ಕರಿಸಿದ್ದಾರೆ,' ಎಂದು ಹೇಳಿಕೆಯಲ್ಲಿ ಸಿಪಿಎಂ ತಿಳಿಸಿದೆ.
ಮೇ 29 ರಂದು ಸಿಪಿಐ (ಎಂ) ರಾಜ್ಯ ಸಮಿತಿ ಸಭೆ ನಡೆಯಿತು. ಅದರ ನಂತರ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷ, 'ನಮ್ಮ ಅಭಿಪ್ರಾಯಗಳನ್ನು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಿಸುವಲ್ಲಿ ನಾವು ಸೋತಿದ್ದೇವೆ,' ಎಂದು ಹೇಳಿಕೊಂಡಿದೆ.
ದಶಕಗಳ ಕಾಲ ರಾಜ್ಯವನ್ನು ಆಳಿದ ಎಡಪಕ್ಷಗಳು ಮತ್ತು ಕಾಂಗ್ರೆಸ್ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಈ ಚುನಾವಣೆಯಲ್ಲಿ ಟಿಎಂಸಿ 292 ಸ್ಥಾನಗಳ ಪೈಕಿ 213 ಸೀಟುಗಳನ್ನು ಗೆದ್ದು ಬೀಗಿದರೆ, ಬಿಜೆಪಿ 77 ಸೀಟುಗಳನ್ನು ಗೆಲ್ಲುವಲ್ಲಿ ಶಕ್ತವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.