ADVERTISEMENT

ಮಮತಾಗೆ ಗುಡ್ ಬೈ ಹೇಳಲು ಬಂಗಾಳ ನಿರ್ಧರಿಸಿದೆ: ಜೆ.ಪಿ.ನಡ್ಡಾ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 9:37 IST
Last Updated 6 ಫೆಬ್ರುವರಿ 2021, 9:37 IST
ಜೆ.ಪಿ.ನಡ್ಡಾ (ಪಿಟಿಐ ಚಿತ್ರ)
ಜೆ.ಪಿ.ನಡ್ಡಾ (ಪಿಟಿಐ ಚಿತ್ರ)   

ಕೋಲ್ಕತ್ತ: ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಗುಡ್ ಬೈ ಹೇಳಲು ಪಶ್ಚಿಮ ಬಂಗಾಳದ ಜನ ನಿರ್ಧರಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಬಂಗಾಳದಲ್ಲಿ ಕಮಲ ಅರಳಿದ ಬಳಿಕ ರಾಜ್ಯದ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಅವರು ಹೇಳಿದ್ದಾರೆ.

‘ಬಂಗಾಳದಲ್ಲಿ ನಾನು ಎಲ್ಲೇ ಹೋದರೂ ‘ಪಿಷಿ (ಬಿಜೆಪಿ ನಾಯಕರು ಮಮತಾ ಅವರನ್ನು ವ್ಯಂಗ್ಯವಾಗಿ ಅತ್ತೆ ಎಂದು ಕರೆಯುತ್ತಿದ್ದಾರೆ)’ ಹಾಗೂ ‘ಭಾಯ್‌ಪೊ (ಮಮತಾ ಅವರ ಸೋದರಳಿಯ ಅಭಿಷೇಕ್‌ ಕುರಿತು ಬಿಜೆಪಿ ನಾಯಕರು ಅಳಿಯ ಎಂದು ಕರೆಯುತ್ತಿದ್ದಾರೆ)’ ಕೈಮುಗಿಯುತ್ತಿರುವ ಫೋಟೊ ಕಾಣಸಿಗುತ್ತಿದೆ. ಮಮತಾ ದೀದಿ ಅವರೇ, ಬಂಗಾಳದ ಜನತೆ ನಿಮಗೆ ಕೈಮುಗಿದು ‘ನಮಸ್ತೆ’ ಮಾಡಲು ನಿರ್ಧರಿಸಿದ್ದಾರೆ’ ಎಂದು ನಡ್ಡಾ ಹೇಳಿದ್ದಾರೆ.

ಮಾಲ್ಡಾ ಜಿಲ್ಲೆಯ ಶಹಾಪುರದಲ್ಲಿ ರೈತರನ್ನು ಉದ್ದೇಶಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಂಗಾಳದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸುವಂತೆ ರೈತರನ್ನು ಒತ್ತಾಯಿಸಿದ್ದಾರೆ. ರೈತರ ಜತೆ ಊಟವನ್ನೂ ಮಾಡಿದ್ದಾರೆ.

‘ನೀವು ಮೋದಿ ಜಿ ಅವರನ್ನು ಆಶೀರ್ವದಿಸಿದರೆ, ಬಂಗಾಳದಲ್ಲಿ ಕಮಲ ಅರಳಿಸಿದರೆ, ನಂತರ ರಾಜ್ಯದಲ್ಲಿ ಅಭಿವೃದ್ಧಿ ಆರಂಭವಾಗಲಿದೆ. ಬಂಗಾಳದಲ್ಲಿ ಕಮಲ ಅರಳಲಿದೆ ಮತ್ತು ರೈತರು ಅಭಿವೃದ್ಧಿ ಕಾಣಲಿದ್ದಾರೆ’ ಎಂದು ನಡ್ಡಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಮಮತಾ ಅವರು ಅಹಂಕಾರದಿಂದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆ ಜಾರಿಗೊಳಿಸಿಲ್ಲ. ಇದರಿಂದ ರಾಜ್ಯದ 70 ಲಕ್ಷ ರೈತರು ಸೌಲಭ್ಯ ವಂಚಿತರಾಗಿದ್ದಾರೆ ಎಂದೂ ನಡ್ಡಾ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.