ADVERTISEMENT

ಬೆಂಗಳೂರಲ್ಲಿ ಕಟ್ಟಡ ‌ಕಾರ್ಮಿಕನಾಗಿದ್ದ 19ರ ಯುವಕನಿಗೆ ಎಂಬಿಬಿಎಸ್‌ ಸೀಟು

ಪಿಟಿಐ
Published 30 ಆಗಸ್ಟ್ 2025, 11:35 IST
Last Updated 30 ಆಗಸ್ಟ್ 2025, 11:35 IST
   

ಬೆರ್ಹಾಂಪುರ (ಒಡಿಶಾ): ಆ ಯುವಕ ವೈದ್ಯನಾಗುವ ಕನಸು ಕಾಣುತ್ತಿದ್ದ. ಆದರೆ, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕುಟುಂಬದ ನೆರವಿಗಾಗಿ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ದುಡಿಯುತ್ತಿದ್ದ. ನೀಟ್‌ನಲ್ಲಿ ಉತ್ತಮ ಸಾಧನೆ ಮಾಡಿರುವ ಆ ಯುವಕನಿಗೆ ಈಗ ಬಿಹಾರದ ವೈದ್ಯಕೀಯ ಕಾಲೇಜಿನ ಸೀಟು ಒಲಿದು ಬಂದಿದೆ.

ಹೌದು, ಖುರ್ದಾ ಜಿಲ್ಲೆಯ ಬಾನ್ಪುರ ತಾಲ್ಲೂಕಿನ ಮುದುಲಿಧಿಯಾ ಗ್ರಾಮದ ಸಹದೇವ ಮತ್ತು ರಂಗಿ ದಂಪತಿಯ ಪುತ್ರ ಶುಭಂ ಸಬರ್ ಈ ಸಾಧನೆ ಮಾಡಿದ್ದು, ಇಲ್ಲಿನ ಎಂ.ಕೆ.ಸಿ.ಜಿ ವೈದ್ಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರವೇಶ ಪಡೆದಿದ್ದಾರೆ. ಅವರು ಪರಿಶಿಷ್ಟ ಪಂಗಡ ವರ್ಗದಲ್ಲಿ 18,212ನೇ ರ‍್ಯಾಂಕ್‌ ಗಳಿಸಿದ್ದಾರೆ.

‘ಬೆಂಗಳೂರಿನಲ್ಲಿ ಕಟ್ಟಡವೊಂದರ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಇತ್ತೀಚೆಗೆ ನಾನು ಕೆಲಸದಲ್ಲಿ ಮಗ್ನನಾಗಿದ್ದೆ. ನನ್ನ ಶಿಕ್ಷಕ ವಾಸುದೇವ ಮೊಹರಾನಾ ಅವರು ಕರೆ ಮಾಡಿ, ಎಲ್ಲರಿಗೂ ಸಿಹಿ ಹಂಚುವಂತೆ ಹೇಳಿದರು. ಇದು ನನಗೆ ಅಚ್ಚರಿ ಮೂಡಿಸಿತ್ತು’ ಎಂದು ಶುಭಂ ಹೇಳಿದ್ದಾರೆ.

ADVERTISEMENT

‘ಯಾಕೆ ಸಿಹಿ ಹಂಚಬೇಕು? ಏನು ಕಾರಣ ಎಂದು ನಾನು ಅವರನ್ನು ಪ್ರಶ್ನಿಸಿದೆ. ನಸುನಕ್ಕ ಅವರು, ನೀಟ್‌ನಲ್ಲಿ ತೇರ್ಗಡೆಯಾಗಿ, ಎಂಬಿಬಿಎಸ್‌ಗೆ ಪ್ರವೇಶ ಪಡೆಯಲು ಅರ್ಹನಾಗಿದ್ದೀಯಾ ಎಂದು ತಿಳಿಸಿದಾಗ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ’ ಎಂದಿದ್ದಾರೆ.

‘ಕನಸು ನನಸಾದ ಕ್ಷಣವದು. ಆನಂದಬಾಷ್ಪ ತಡೆಯಲು ನನ್ನಿಂದ ಆಗಲಿಲ್ಲ. ಮನೆಗೆ ಬಂದೆ. ನಾನು ದುಡಿಯುತ್ತಿದ್ದ ಕಟ್ಟಡದ ಗುತ್ತಿಗೆದಾರನ ಅನುಮತಿ ಪಡೆದು, ಊರಿಗೆ ಮರಳಿದೆ’ ಎಂದು ಶುಭಂ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮೂರು ತಿಂಗಳು ಕೆಲಸ ಮಾಡಿರುವ ಅವರು, ₹45 ಸಾವಿರ ಗಳಿಸಿದ್ದಾರೆ. ಈ ಪೈಕಿ ₹25 ಸಾವಿರ ಉಳಿತಾಯ ಮಾಡಿದ್ದಾರೆ. ‘ಬೆಂಗಳೂರಿಗೆ ವಲಸೆ ಹೋಗಲು ಕಾರಣವೇನು’ ಎಂಬ ಪ್ರಶ್ನೆಗೆ,‘ನನ್ನ ಕುಟುಂಬಕ್ಕೆ ನೆರವು ನೀಡಬೇಕಿತ್ತು. ಇಲ್ಲಿಗೆ ಬಂದು ದುಡಿಯದೇ ಬೇರೆ ದಾರಿಯೇ ಇರಲಿಲ್ಲ’ ಎಂದು ಶುಭಂ ಉತ್ತರಿಸಿದ್ದಾರೆ.

‘ನಮ್ಮದು ಐದು ಜನರಿರುವ ಬಡ ಕುಟುಂಬ. ನೀಟ್‌ ಮುಗಿದ ನಂತರ, ಕುಟುಂಬಕ್ಕೆ ನೆರವು ನೀಡುವುದಕ್ಕಾಗಿ ಹಣ ಗಳಿಸಬೇಕು ಎಂದು ನಿರ್ಧರಿಸಿದೆ. ಸ್ಥಳೀಯ ಗುತ್ತಿಗೆದಾರರೊಬ್ಬರನ್ನು ಸಂಪರ್ಕಿಸಿದಾಗ ಅವರು ನನ್ನನ್ನು ಬೆಂಗಳೂರಿಗೆ ಕಳುಹಿಸಿದರು. ನಾನು ಉಳಿತಾಯ ಮಾಡಿರುವ ಹಣವು ಎಂಬಿಬಿಎಸ್‌ಗೆ ಪ್ರವೇಶ ಪಡೆಯಲು ನೆರವಾಯಿತು’ ಎಂದಿದ್ದಾರೆ.

‘ಹಣಕಾಸು ನೆರವು ನೀಡುವ ಮೂಲಕ, ನನ್ನ ಮಗ ಎಂಬಿಬಿಎಸ್‌ ಪೂರ್ಣಗೊಳಿಸುವುದಕ್ಕೆ ಸರ್ಕಾರ ನೆರವು ನೀಡಲಿದೆ ಎಂಬ ಭರವಸೆ ಹೊಂದಿದ್ದೇವೆ’ ಎಂದು ಶುಭಂ ಪಾಲಕರಾದ ಸಹದೇವ ಮತ್ತು ರಂಗಿ ಹೇಳಿದ್ದಾರೆ.

ಶುಭಂ ಪ್ರತಿಭಾವಂತ. ಚಿಕ್ಕಂದಿನಿಂದಲೂ ಶ್ರಮವಹಿಸಿ ಓದುತ್ತಿದ್ದ ಆತ ವೈದ್ಯನಾಗಬೇಕು ಎಂಬ ಕನಸು ಕಂಡಿದ್ದ. ಆತನ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಂತಾಗಿದೆ
ರಂಗಿ, ಶುಭಂ ತಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.