ADVERTISEMENT

ದೇಶದ ಏಕತೆ ದುರ್ಬಲಗೊಳಿಸಲು ಯತ್ನಿಸುವ ಶಕ್ತಿಗಳ ಬಗ್ಗೆ ಎಚ್ಚರವಿರಲಿ: ಪಿಎಂ ಮೋದಿ

ಪಿಟಿಐ
Published 31 ಅಕ್ಟೋಬರ್ 2022, 6:16 IST
Last Updated 31 ಅಕ್ಟೋಬರ್ 2022, 6:16 IST
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ   

ಕೆವಾಡಿಯಾ (ಗುಜರಾತ್‌): ವೈರಿಗಳು ದೇಶದ ಏಕತೆಯನ್ನು ಒಡೆಯಲು ಪ್ರತ್ನಿಸುತ್ತಿದ್ದಾರೆ. ದೇಶವು ಅಂತಹ ಪ್ರಯತ್ನಗಳ ವಿರುದ್ಧ ದೃಢವಾಗಿ ನಿಲ್ಲಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ಜನ್ಮದಿನದ ಪ್ರಯುಕ್ತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಮರ್ಪಿಸಿದ ಮೋದಿ, ಗುಜರಾತ್‌ನಲ್ಲಿ ಭಾನುವಾರ ಸಂಜೆ ಸಂಭವಿಸಿದ ತೂಗುಸೇತುವೆ ದುರಂತದಲ್ಲಿ ಮೃತಪಟ್ಟವರನ್ನು ಸ್ಮರಿಸಿ ಭಾವುಕರಾದರು.

'ನಾನು ಕೆವಾಡಿಯಾಗೆ ಬಂದಿದ್ದೇನೆ. ಆದರೆ, ನನ್ನ ಹೃದಯ ಮೊರ್ಬಿ ತೂಗುಸೇತುವೆ ದುರಂತದಲ್ಲಿ ಮೃತಪಟ್ಟವರಿಗಾಗಿ ಮರುಗುತ್ತಿದೆ' ಎಂದು ಹೇಳಿದ್ದಾರೆ.

ADVERTISEMENT

ಪಶ್ಚಿಮ ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆ ಭಾನುವಾರ ಸಂಜೆ ಮುರಿದು ಬಿದ್ದು 135 ಮಂದಿ ಮೃತಪಟ್ಟಿದ್ದಾರೆ. ಈ ವರೆಗೆ 185 ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ. 19ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದ 230 ಮೀಟರ್‌ ಉದ್ದದ ಈ ಸೇತುವೆಯನ್ನು ನವೀಕರಣದ ಸಲುವಾಗಿ ಕಳೆದ ಆರು ತಿಂಗಳಿನಿಂದ ನಾಗರಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ (ಅಕ್ಟೋಬರ್‌ 26) ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು.

ಏಕತೆಗೆ ಕರೆ
ಸರ್ದಾರ್‌ ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವೇಳೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ, 'ದೇಶದ ಒಗ್ಗಟ್ಟು ನಮ್ಮ ವೈರಿಗಳ ಕಣ್ಣಿಗೆ ರಾಚುತ್ತಿದೆ. ಇಂದು ಮಾತ್ರವಲ್ಲ, ಸಾವಿರಾರು ವರ್ಷಗಳಿಂದಲೂ, ನಮ್ಮ ಗುಲಾಮಗಿರಿಯ ದಿನಗಳಿಂದಲೂ ವಿದೇಶಿ ಆಕ್ರಮಣಕಾರರು ನಮ್ಮ ಏಕತೆಯನ್ನು ಮುರಿಯಲು ಎಲ್ಲರೀತಿಯ ಪ್ರಯತ್ನವನ್ನು ಮಾಡಿದ್ದಾರೆ. ಆ ಸುದೀರ್ಘ ಅವಧಿಯಲ್ಲಿ ವಿಷ ಹರಡಲಾಗಿದೆ. ದೇಶವು ಇಂದೂ ಸಹ ಅದರಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ. ದೇಶದ ವಿಭಜನೆಯನ್ನು ಮತ್ತು ಅದರಿಂದ ವೈರಿಗಳು ಲಾಭ ಪಡೆದುದ್ದನ್ನು ನಾವು ನೋಡಿದ್ದೇವೆ' ಎಂದು ಹೇಳಿದ್ದಾರೆ.

ಅಂತಹ ಶಕ್ತಿಗಳು ಈಗಲೂ ಪ್ರಚಲಿತದಲ್ಲಿವೆ. ಅವು ದೇಶದ ಜನರು ಜಾತಿ, ಧರ್ಮ, ಭಾಷೆ ಹೆಸರಿನಲ್ಲಿ ಕಿತ್ತಾಡುವುದನ್ನು ಬಯಸುತ್ತಿವೆ ಎಂದು ದೂರಿದ್ದಾರೆ.

'ಆ ಶಕ್ತಿಗಳು ನಮಗೆ ತಿಳಿದಿರುವ ಹೊರಗಿನ ವೈರಿಗಳಲ್ಲ, ಗುಲಾಮಿ ಮನಸ್ಥಿತಿಯ ರೂಪದಲ್ಲಿ ನಮ್ಮೊಳಗೆ ಪ್ರವೇಶಿಸುತ್ತವೆ ಎಂಬುದು ನಮಗೆ ಅರಿವಿರಬೇಕು. ನಾವು ಈ ದೇಶದ ಮಕ್ಕಳಾಗಿ, ಒಂದಾಗಿ ನಿಂತು ಅವುಗಳಿಗೆ (ವೈರಿಗಳಿಗೆ)ಉತ್ತರಿಸಬೇಕು' ಎಂದು ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.