ಚೆನ್ನೈ: ತಿರುಚಿರಾಪಳ್ಳಿಯ ಶ್ರೀರಂಗಂನಲ್ಲಿರುವ ಪ್ರಸಿದ್ಧ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ತೆರಳಿದ ತಮಗೆ ಧರ್ಮದ ಆಧಾರದಲ್ಲಿ ಪ್ರವೇಶಕ್ಕೆ ತಡೆಯೊಡ್ಡಲಾಗಿದೆ ಎಂದು ಭರತನಾಟ್ಯ ಕಲಾವಿದ ಜಾಕೀರ್ ಹುಸೇನ್ ಆರೋಪಿಸಿದ್ದಾರೆ.
‘ಶ್ರೀರಂಗಂನ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಈ ಹಿಂದೆ ಹಲವು ಬಾರಿ ನಾನು ಭೇಟಿ ನೀಡಿದ್ದು ಇಲ್ಲಿ ಭರತನಾಟ್ಯದ ಪ್ರದರ್ಶನವನ್ನೂ ನೀಡಿದ್ದೇನೆ. ಇದೇ ಮೊದಲ ಬಾರಿಗೆ ದೇವಸ್ಥಾನ ಪ್ರವೇಶಿಸದಂತೆ ನನ್ನನ್ನು ತಡೆಯಲಾಯಿತು. ರಂಗರಾಜನ್ ನರಸಿಂಹನ್ ಎಂಬುವವರ ಆಜ್ಞೆಯ ಮೇರೆಗೆ ಧರ್ಮದ ಆಧಾರದಲ್ಲಿ ನನಗೆ ಪ್ರವೇಶ ನಿರಾಕರಿಸಿ ನನ್ನನ್ನು ಹೊರಹಾಕಲಾಯಿತು’ ಎಂದು ಹುಸೇನ್ ಹೇಳಿದರು.
ಹಿಂದೂಗಳಿಗೆ ಮಾತ್ರ ದೇವಸ್ಥಾನಕ್ಕೆ ಪ್ರವೇಶ ಎಂಬ ನಾಮಫಲಕವನ್ನು ಹಾಕಲಾಗಿದೆ ಎಂದೂ ಅವರು ಹೇಳಿದರು.
ಹುಸೇನ್ ಅವರು ಹೆಸರಿಸಿದ ರಂಗರಾಜನ್ ನರಸಿಂಹನ್ ಅವರು ಶ್ರೀರಂಗಂ ಮೂಲದ ಒಬ್ಬ ಕಾರ್ಯಕರ್ತನಾಗಿದ್ದು ತಮಿಳುನಾಡಿನಾದ್ಯಂತ ಇರುವ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ಹೋರಾಡುತ್ತಿದ್ದಾರೆ.
‘ದೇವಸ್ಥಾನಕ್ಕೆ ಮುಸ್ಲಿಂ ವ್ಯಕ್ತಿಯ ಪ್ರವೇಶವನ್ನು ತಡೆದಿದ್ದೇನೆ’ ಎಂದು ರಂಗರಾಜನ್ ಟ್ವಿಟರ್ ಪೋಸ್ಟ್ವೊಂದರಲ್ಲಿ ಒಪ್ಪಿಕೊಂಡಿದ್ದಾರೆ.
‘ಜಾಕೀರ್ ಹುಸೇನ್ಗೆ ದೇವಸ್ಥಾನದ ಆಡಳಿತದ ಕಡೆಯಿಂದ ಪ್ರವೇಶ ನಿರಾಕರಿಸಿಲ್ಲ. ಪ್ರವೇಶಕ್ಕೆ ಅವರಿಗೆ ಮುಕ್ತ ಸ್ವಾಗತವಿದೆ. ನರಸಿಂಹನ್ ಅವರ ವರ್ತನೆ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ದೇವಸ್ಥಾನದ ವ್ಯವಸ್ಥಾಪಕ ಮಂಡಳಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.