ADVERTISEMENT

ಹೋರಾಟಗಾರ ನವಲಖ ಸ್ಥಳಾಂತರ: ದೆಹಲಿ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ಪಿಟಿಐ
Published 6 ಜುಲೈ 2020, 9:32 IST
Last Updated 6 ಜುಲೈ 2020, 9:32 IST
ಗೌತಮ್‌ ನವಲಖ ಅವರನ್ನು 2018ರಲ್ಲಿ ಬಂಧಿಸಿದ ಕ್ಷಣದ ಕ್ಷಣದ ಚಿತ್ರ
ಗೌತಮ್‌ ನವಲಖ ಅವರನ್ನು 2018ರಲ್ಲಿ ಬಂಧಿಸಿದ ಕ್ಷಣದ ಕ್ಷಣದ ಚಿತ್ರ   

ನವದೆಹಲಿ: ಭೀಮಾ ಕೋರೆಗಾಂವ್‌ ಗಲಭೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮಾನವ ಹಕ್ಕುಗಳ ಹೋರಾಟಗಾರ ಗೌತಮ್‌ ನವಲಖ ಅವರನ್ನು, ದೆಹಲಿಯಿಂದ ಮುಂಬೈಗೆ ಸ್ಥಳಾಂತರಿಸಿದ ವಿಚಾರವಾಗಿ ನ್ಯಾಯಾಂಗದ ದಾಖಲೆಗಳನ್ನು ಸಲ್ಲಿಸಲು ದೆಹಲಿ ಹೈಕೋರ್ಟ್‌ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ)ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಸೋಮವಾರ ರದ್ದುಪಡಿಸಿದೆ.

‘ನವಲಖ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸುವುದು ದೆಹಲಿ ಹೈಕೋರ್ಟ್‌ನ ವ್ಯಾಪ್ತಿಗೆ ಬರುವುದಿಲ್ಲ. ಅದು ಬಾಂಬೆ ಹೈಕೋರ್ಟ್‌ ವ್ಯಾಪ್ತಿಗೆ ಬರುತ್ತದೆ’ ಎಂದು ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ನವೀನ್‌ ಸಿನ್ಹಾ ಹಾಗೂ ಇಂದಿರಾ ಬ್ಯಾನರ್ಜಿ ಅವರ ಪೀಠ ಹೇಳಿದೆ.

ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಾ, ಮೇ 27ರಂದು ದೆಹಲಿ ಹೈಕೋರ್ಟ್‌ ಎನ್‌ಐಎ ವಿರುದ್ಧ ಮಾಡಿದ್ದ ಪ್ರತಿಕೂಲ ಟೀಕೆಗಳನ್ನು ಸಹ ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. ನವಲಖ ಅವರ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ಬಾಕಿ ಇದ್ದರೂ, ಅವರನ್ನು ತಿಹಾರ್‌ ಜೈಲಿನಿಂದ ಮುಂಬೈಗೆ ಸ್ಥಳಾಂತರಿಸುವಲ್ಲಿ ತರಾತುರಿಯಲ್ಲಿ ವರ್ತಿಸಿದ್ದಕ್ಕಾಗಿ ಎನ್‌ಐಎಯನ್ನು ಟೀಕಿಸಿ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಕೆಲವು ದಿನಗಳ ಹಿಂದೆ ತಡೆಯಾಜ್ಞೆ ನೀಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.