ADVERTISEMENT

ದೇವಾಲಯಗಳಲ್ಲಿ ಭಜನೆ ಹಾಡುತ್ತಾರೆ ಸಂಸ್ಕೃತ ಪ್ರೊಫೆಸರ್ ಫಿರೋಜ್ ಖಾನ್ ಅಪ್ಪ

ಪಿಟಿಐ
Published 22 ನವೆಂಬರ್ 2019, 4:57 IST
Last Updated 22 ನವೆಂಬರ್ 2019, 4:57 IST
ಭಜನೆ ಹಾಡುತ್ತಿರುವ ರಮ್ಜಾನ್  ಖಾನ್ (ಕೃಪೆ: ಪಿಟಿಐ)
ಭಜನೆ ಹಾಡುತ್ತಿರುವ ರಮ್ಜಾನ್ ಖಾನ್ (ಕೃಪೆ: ಪಿಟಿಐ)   

ವಾರಣಾಸಿ:'ಸಂಸ್ಕೃತ ಕಲಿಸಲು ಮುಸ್ಲಿಂ ಬೇಡ' ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳು ಅಸಿಸ್ಟೆಂಟ್ ಪ್ರೊಫೆಸರ್ ಫಿರೋಜ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. 12 ದಿನಗಳ ಕಾಲ ಪ್ರತಿಭಟನೆ ಮುಂದುವರಿದಿದ್ದರಿಂದ ಫಿರೋಜ್‌ ಖಾನ್ ವಿಶ್ವವಿದ್ಯಾಲಯ ಬಿಟ್ಟು ತಮ್ಮ ಊರು ಜೈಪುರಕ್ಕೆ ವಾಪಾಸ್‌ ಆಗಿದ್ದರು.

ಬನಾರಸ್ ವಿಶ್ವವಿದ್ಯಾಲಯಲ್ಲಿ ಫಿರೋಜ್ ಖಾನ್ ಮುಸ್ಲಿಂ ಎಂಬ ಕಾರಣಕ್ಕೆ ಪ್ರತಿಭಟನೆಗಳು ಎದ್ದಿರುವಾಗ ಇತ್ತ ಜೈಪುರದಲ್ಲಿ ಫಿರೋಜ್ ಖಾನ್ ಅಪ್ಪ ರಮ್ಜಾನ್ ಖಾನ್ ದೇವಾಲಯಗಳಲ್ಲಿ ಹಾರ್ಮೋನಿಯಂ ನುಡಿಸಿ ಭಜನೆ, ಭಕ್ತಿಗೀತೆಗಳನ್ನು ಹಾಡುತ್ತಿದ್ದಾರೆ. ಇಲ್ಲಿ ಯಾರೂ ಧರ್ಮದ ಬಗ್ಗೆ ಪ್ರಶ್ನಿಸುತ್ತಿಲ್ಲ, ಪ್ರತಿಭಟನೆಯೂ ನಡೆಸುತ್ತಿಲ್ಲ.

ADVERTISEMENT

ಜೈಪುರದಿಂದ 35 ಕಿಮೀ ದೂರದಲ್ಲಿರುವ ಬಗ್ರು ಎಂಬ ಊರಲ್ಲಿ ಶ್ರೀ ರಾಮದೇವ್ ಗೋಶಾಲಾ ಚೈತನ್ಯ ಧಾಮದಲ್ಲಿ ರಮ್ಜಾನ್ ಖಾನ್ ಭಜನೆ ಹಾಡಿದ್ದಾರೆ.
ಬಗ್ರು ಎಂಬ ಈ ಊರಲ್ಲಿ ಮೂರು ಕೋಣೆಗಳ ಮನೆಯಲ್ಲಿ ವಾಸವಾಗಿದ್ದಾರೆ ಫಿರೋಜ್ ಖಾನ್ ಮತ್ತು ಕುಟುಂಬ. ಸಂಸ್ಕೃತ ಮತ್ತು ಹಿಂದೂ ಸಂಸ್ಕೃತಿಯೇ ಮೈದಳೆದಿರುವ ಈ ಊರಲ್ಲಿ ಫಿರೋಜ್ ಖಾನ್ ಹುಟ್ಟಿದ್ದು.

ಫಿರೋಜ್ ಖಾನ್ ಸಂಸ್ಕೃತದಲ್ಲಿ ಡಾಕ್ಟರೇಟ್ ಪಡೆದವರಾಗಿದ್ದಾರೆ. ಅವರ ಅಪ್ಪ ರಮ್ಜಾನ್ ಖಾನ್ ಸಂಸ್ಕೃತದಲ್ಲಿ ಶಾಸ್ತ್ರಿ ಪದವಿ ಪಡೆದಿದ್ದು, ಭಕ್ತಿ ಗೀತೆಗಳನ್ನು ರಚಿಸಿ ಮನೆಯ ಪಕ್ಕದಲ್ಲಿರುವ ಗೋಸೇವಾದಲ್ಲಿ ಹಾಡು ಹಾಡುತ್ತಾರೆ. ಅದೇ ವೇಳೆ ನಮಾಜ್ ಮಾಡಲು ಮಸೀದಿಗೂ ಹೋಗುತ್ತಾರೆ.ಖಾನ್ ಅವರ ಬಂಧುಗಳು ಮತ್ತು ಅಲ್ಲಿರುವ ಹಿಂದೂ ಸಮುದಾಯದವರಿಗೆ ಈ ಬಗ್ಗೆ ಯಾವುದೇ ಅಭ್ಯಂತರವಿಲ್ಲ.

ನನ್ನ ಮಗ ಪ್ರತಿಷ್ಠಿತ ಬನಾರಲ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ನೇಮಕ ಆಗಿದ್ದಾನೆ ಎಂದಾಗ ಖುಷಿಯಾಗಿತ್ತು. ಆದರೆ ವಿದ್ಯಾರ್ಥಿಗಳ ಪ್ರತಿಭಟನೆ ದುರದೃಷ್ಟಕರ. ನನ್ನ ಮಗನ ಹಿನ್ನೆಲೆ ಏನು ಎಂಬುದನ್ನು ಅರಿಯಿರಿ ಎಂದು ನಾನು ಪ್ರತಿಭನೆ ನಿರತ ವಿದ್ಯಾರ್ಥಿಗಳಲ್ಲಿ ಮನವಿ ಮಾಡುತ್ತೇನೆ.

ನನ್ನ ಮಗನಿಗೆ ನನ್ನಂತೆ ಸಂಸ್ಕೃತ ಕಲಿಯಬೇಕೆಂಬ ಆಸೆಯಿತ್ತು. ಹಾಗಾಗಿ ಅವನಿಗೆ ಸಂಸ್ಕೃತ ಕಲಿಸಿದೆ. ಅವನಿಗೆ ಗುರುಗಳ ಆಶೀರ್ವಾದವಿದೆ. ಹಾಗಾಗಿ ಉನ್ನತ ಶಿಕ್ಷಣ ಪಡೆದು ಬಿಎಚ್‌ಯುಗೆ ನೇಮಕವಾದ ಎಂದು ರಮ್ಜಾನ್ ಖಾನ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.