ಪ್ರಣಾಳಿಕೆ ಬಿಡುಗಡೆ ಮಾಡಿದ ನಾಯಕರು
– ಪಿಟಿಐ ಚಿತ್ರ
ಪಟ್ನಾ: ವಿಧಾನಸಭೆ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಎನ್ಡಿಎ ಮೈತ್ರಿಕೂಟ ಶುಕ್ರವಾರ ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ಒಂದು ಕೋಟಿ ಯುವಜನರಿಗೆ ಉದ್ಯೋಗ, ಐದು ವರ್ಷದಲ್ಲಿ ₹ 50 ಲಕ್ಷ ಕೋಟಿ ಹೂಡಿಕೆ ಹಾಗೂ ರಾಜ್ಯದ ಪ್ರತೀ ಜಿಲ್ಲೆಗಳಲ್ಲೂ ಕೌಶಲಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದೆ.
‘ಸಂಕಲ್ಪ ಪತ್ರ’ ಎನ್ನುವ ಹೆಸರಿನ ಪ್ರಣಾಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಜೆ.ಪಿ ನಡ್ಡಾ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎಚ್ಎಎಂಸ್ (ಎಸ್) ನಾಯಕ ಜಿತನ್ ರಾಮ್ ಮಾಂಝಿ, ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಹಾಗೂ ಆರ್ಎಂಎಲ್ ನಾಯಕ ಉಪೇಂದ್ರ ಕುಶ್ವಾಹ ಪಟ್ನಾದಲ್ಲಿ ಬಿಡುಗಡೆ ಮಾಡಿದರು.
ಒಂದು ಕೋಟಿ ಮಹಿಳೆಯರಿಗೆ ‘ಲಖ್ಪತಿ ದೀದಿ’ ಯೋಜನೆಯಡಿ ಹಣಕಾಸಿನ ನೆರವು, ರಾಜ್ಯದಲ್ಲಿ 7 ಎಕ್ಸ್ಪ್ರೆಸ್ವೇ, ಇನ್ನೂ ನಾಲ್ಕು ನಗರಗಳಲ್ಲಿ ಮೆಟ್ರೊ ಸೇವೆ ಒದಗಿಸುವ ಭರವಸೆ ಪ್ರಣಾಳಿಕೆಯಲ್ಲಿದೆ.
ಒಂದು ವೇಳೆ ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ₹ 50 ಲಕ್ಷ ಕೋಟಿ ಹೂಡಿಕೆ ತರುತ್ತೇವೆ. ಕೆ.ಜಿಯಿಂದ ಪಿ.ಜಿವರೆಗೆ ಗುಣಮಟ್ಟದ ಉಚಿತ ಶಿಕ್ಷಣ, ತೀರಾ ಹಿಂದುಳಿದ ವರ್ಗದ ಜನರಿಗೆ ₹ 10 ಲಕ್ಷದ ವರೆಗೆ ಹಣಕಾಸಿನ ನೆರವು ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೇಳಿದ್ದಾರೆ.
(ಪಿಟಿಐ ಮಾಹಿತಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.