ಪಟ್ನಾ: ಮಗಳ ಮದುವೆಗೆಂದು ಪಡೆದಿದ್ದ ಸಾಲವನ್ನು ಮರು ಪಾವತಿಸಿಲ್ಲವೆಂದು ಮಹಿಳೆಯ ಕೈ, ಕಿವಿ, ಸ್ತನ ಕತ್ತರಿಸಿ ಭೀಕರವಾಗಿ ಕೊಲೆಗೈದಿರುವ ಘಟನೆ ಇಲ್ಲಿನ ಭಾಗಲ್ಪುರದಲ್ಲಿ ನಡೆದಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನೀಲಂ ಮೃತ ಮಹಿಳೆ. ಮಗಳ ಮದುವೆಗೆಂದು ಪಡೆದ ಸಾಲವನ್ನು ಮರು ಪಾವತಿಸಿಲ್ಲ ಎಂಬ ಕಾರಣಕ್ಕೆ ಶಕೀಲ್ ಮಿಯಾನ್ ಮತ್ತು ಆತನ ಸಹಚರ ಶನಿವಾರ ಜನನಿಬಿಡಮಾರುಕಟ್ಟೆಯಲ್ಲಿ ಹಾಡುಹಗಲೇ ದಾಳಿ ನಡೆಸಿ ಮಹಿಳೆಯ ಕೈ, ಕಿವಿ, ಕಾಲು, ಸ್ತನವನ್ನು ಕತ್ತರಿಸಿದ್ದರು. ಮಾರಣಾಂತಿಕ ದಾಳಿಯಿಂದ ಬದುಕಿಳಿದ ಮಹಿಳೆ ಓಡಿ ತಪ್ಪಿಸಿಕೊಂಡಿದ್ದಾರೆ. ಆದರೆ ಆಕೆ ಎಚ್ಚರ ತಪ್ಪಿ ಬೀಳುವವರೆಗೆ ಯಾರೂ ಕೂಡ ಆಕೆಯ ಸಹಾಯಕ್ಕೆ ಧಾವಿಸಿಲ್ಲ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ನೀಲಂ ಎಚ್ಚರ ತಪ್ಪುವ ಮೊದಲು ಆರೋಪಿಗಳ ಹೆಸರು ಹೇಳಿದ್ದಾರೆ. ಅದನ್ನು ಪ್ರತ್ಯಕ್ಷದರ್ಶಿಗಳು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಅದನ್ನು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕೋಮು ಸೇರಿದಂತೆ ವಿವಿಧ ಆಯಾಮಗಳಿಂದತನಿಖೆ ಪ್ರಾರಂಭಿಸಿದ್ದಾರೆ. ಮುನ್ನಚ್ಚರಿಕೆ ಕ್ರಮವಾಗಿ ಠಾಣಾ ವ್ಯಾಪ್ತಿಯಲ್ಲಿ ಬಿಗಿಭದ್ರತೆ ಏರ್ಪಡಿಸಲಾಗಿದೆ.
ಸಿಂಧಿಯಾ ಸೇತುವೆ ಬಳಿ ಆರೋಪಿಗಳು ಹರಿತವಾದ ಆಯುಧಗಳಿಂದ ಮಹಿಳೆ ಮೇಲೆ ದಾಳಿ ನಡೆಸಿದ್ದಾರೆ. ಸಾರ್ವಜನಿಕರು ಸ್ಥಳಕ್ಕೆ ಧಾವಿಸುವ ಮೊದಲು ಆರೋಪಿಗಳು ಆಯುಧ ಎಸೆದು ಪರಾರಿಯಾಗಿದ್ದಾರೆ. ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಜವಾಹರ್ಲಾಲ್ ವೈದ್ಯಕೀಯ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಿಸಲಿಲ್ಲ ಎಂದು ಭಾಗಲ್ಪುರ್ ಠಾಣೆಯ ಎಸ್ಪಿ ಸ್ವರ್ಣ ಪ್ರಭಾತ್ ತಿಳಿಸಿದ್ದಾರೆ.
ಆರೋಪಿ ಮತ್ತು ಮೃತ ಮಹಿಳೆ ನೆರೆಯವರಾಗಿದ್ದು ಅವರ ನಡುವೆ ಉತ್ತಮ ಬಾಂಧವ್ಯ ಇತ್ತು. ಹೀಗಾಗಿ ಮಗಳ ಮದುವೆಗೆಂದು ನೀಲಂ ಸಾಲ ಪಡೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.