ADVERTISEMENT

ಬಿರಿಯಾನಿ ಮಾರದಂತೆ ದಲಿತನ ಮೇಲೆ ಹಲ್ಲೆ : ದೆಹಲಿ ಸಮೀಪ ಘಟನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 13:41 IST
Last Updated 15 ಡಿಸೆಂಬರ್ 2019, 13:41 IST
   

ನವದೆಹಲಿ: ಕೆಳಜಾತಿಯ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ಬಿರಿಯಾನಿ ಮಾರುತ್ತಿರುವುದನ್ನು ಪ್ರಶ್ನಿಸಿದ ಅಪರಿಚಿತರ ಗುಂಪು ಆತನ ಮೇಲೆ ಹಲ್ಲೆ ನಡೆಸಿ ಅನ್ನ ಚಲ್ಲಾಪಿಲ್ಲಿ ಮಾಡಿರುವ ಘಟನೆ ದೆಹಲಿ ಸಮೀಪ ನಡೆದಿದೆ.

ದೆಹಲಿಯಿಂದ ಸುಮಾರು 66 ಕಿಲೋ ಮೀಟರ್ ದೂರದಲ್ಲಿರುವ ರಾಬುಪುರ ಎಂಬಲ್ಲಿ ಈ 43 ವರ್ಷ ವಯಸ್ಸಿನ ಲೋಕೇಶ್ ಎಂಬಾತ ತನ್ನ ಪಾತ್ರೆ ಪರಿಕರಗಳನ್ನು ಇಟ್ಟುಕೊಂಡು ಬಿರಿಯಾನಿ ಮಾರಾಟ ಮಾಡುತ್ತಿದ್ದ. ಈ ಸಮಯದಲ್ಲಿ ಬಂದ ಗುಂಪೊಂದು ಆತನನ್ನು ಹಿಡಿದು ಯಾವ ಜಾತಿ ಎಂದು ಕೇಳಿದ್ದಾರೆ. ತಾನು ದಲಿತ ಎಂದು ಹೇಳುತ್ತಿದ್ದಂತೆ ನೀನು ಕೀಳು ಜಾತಿಯವನಾಗಿದ್ದು ಬಿರಿಯಾನಿ ಮಾರಾಟ ಮಾಡುತ್ತಿದ್ದೀಯ ಎಂದು ಆತನ ಮೇಲೆ ಮನಸೋ ಇಚ್ಛೆ ಥಳಿಸಿದ್ದಾರೆ. ಇದನ್ನು ವಿಡಿಯೋ ಮಾಡಿದ್ದಲ್ಲದೆ, ಅದನ್ನು ಸಾಮಾಜಿಕ ಜಾಲತಾಣಗಳಿಗೆ ಶೇರ್ ಮಾಡಿದ್ದಾರೆ.

ಈ ವಿಷಯ ವೈರಲ್ ಆಗುತ್ತಿದ್ದಂತೆವಿಡಿಯೋ ನೋಡಿದ ಪೊಲೀಸರು ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಪತ್ತೆ ಮಾಡಿ ಆತನಿಂದ ಮಾಹಿತಿ ಪಡೆದಿದ್ದಾರೆ. ಕೂಡಲೆ ಆತನನ್ನು ಠಾಣೆಗೆ ಕರೆದೊಯ್ದ ಪೊಲೀಸರು ದೌರ್ಜನ್ಯ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ADVERTISEMENT

ಈ ಘಟನೆಯನ್ನು ನೋಡಿದ ಟ್ವಿಟಿಗರು ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.