ನವದೆಹಲಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮತ್ತು ಆಲ್ ಇಂಡಿಯ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷರ ನಡುವೆ ವಾಗ್ದಾಳಿ ತಾರಕಕ್ಕೇರಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾಡಿರುವ ಆರೋಪಗಳ ಬಗ್ಗೆಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಪ್ರತಿಕ್ರಿಯಿಸಿ, ಬಿಜೆಪಿಯ ಉದ್ದೇಶ 'ದ್ವೇಷವನ್ನು ಸೃಷ್ಟಿಸುವುದಾಗಿದೆ' ಎಂದು ಹೇಳಿದರು.
ಚುನಾವಣಾ ಪಟ್ಟಿಯಲ್ಲಿ 30,000 ರೋಹಿಂಗ್ಯಾಗಳಿದ್ದರೆ, ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ? ಅವರು ಮಲಗಿದ್ದಾರೆಯೇ? 30,000-40,000 ರೋಹಿಂಗ್ಯಾಗಳನ್ನು ಹೇಗೆ ಪಟ್ಟಿ ಮಾಡಲಾಗಿದೆ ಎಂಬುದನ್ನು ನೋಡುವುದು ಅವರ ಕೆಲಸವಲ್ಲವೇ? ಒಂದು ವೇಳೆ ಬಿಜೆಪಿಯು ಪ್ರಾಮಾಣಿಕವಾಗಿದ್ದರೆ, ನಾಳೆಯೊಳಗೆ ಅಂತಹ 1,000 ಹೆಸರುಗಳನ್ನು ತೋರಿಸಲಿ ಎಂದಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
'ದ್ವೇಷವನ್ನು ಸೃಷ್ಟಿಸುವುದು ಅವರ ಉದ್ದೇಶ. ಈ ಹೋರಾಟ ಹೈದರಾಬಾದ್ ಮತ್ತು ಭಾಗ್ಯನಗರದ ನಡುವೆ ನಡೆಯುತ್ತಿದೆ. ಯಾರು ಗೆಲ್ಲಬೇಕು ಎನ್ನುವುದನ್ನು ನಿರ್ಧರಿಸುವುದು ಈಗ ನಿಮ್ಮ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಒವೈಸಿ ಮೇಲೆ ವಾಗ್ದಾಳಿ ನಡೆಸಿದ್ದ ತೇಜಸ್ವಿ ಸೂರ್ಯ, ಪಾಕಿಸ್ಥಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾರಿಗೆ ಹೋಲಿಸಿದ್ದರು. ಅವರು 'ಉನ್ಮತ್ತ ಇಸ್ಲಾಮಿಸಂ, ಪ್ರತ್ಯೇಕತಾವಾದ ಮತ್ತು ಉಗ್ರವಾದ' ದ ಭಾಷೆಯನ್ನು ಮಾತನಾಡುತ್ತಿದ್ದಾರೆ. ಅದನ್ನು ಜಿನ್ನಾ ಕೂಡ ಬಳಸಿದ್ದಾರೆ. ಅವರು ಹಳೆಯ ಹೈದರಾಬಾದ್ನಲ್ಲಿ ಅಭಿವೃದ್ಧಿಗೆ ಅವಕಾಶ ನೀಡಿಲ್ಲ. ಅವರು ಕೇವಲ ರೋಹಿಂಗ್ಯಾ ಮುಸ್ಲಿಮರ ಬಗ್ಗೆ ಮಾತ್ರ ಮಾತನಾಡುತ್ತಾರೆ' ಎಂದು ಹೇಳಿದ್ದರು.
ಪ್ರತಿಯೊಬ್ಬ ಭಾರತೀಯ ಒವೈಸಿ ಸಹೋದರರ ಕೋಮುವಾದಿ ರಾಜಕೀಯದ ವಿರುದ್ಧ ನಿಲ್ಲಬೇಕು. ಹೈದರಾಬಾದ್ನಲ್ಲಿ ನೀವು ಅವರಿಗೆ ಮತ ಹಾಕಿದರೆ, ಅವರು ಮಹಾರಾಷ್ಟ್ರ, ಕರ್ನಾಟಕ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಬಲಶಾಲಿಯಾಗುತ್ತಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.