ಮುಂಬೈ: ‘ಮಳೆಯಾದಾಗ ಕಪ್ಪೆಗಳು ಹೊರಬರುವಂತೆ, ಚುನಾವಣೆಯ ಸಂದರ್ಭದಲ್ಲಿ ಮಾತ್ರ ಜರಾಂಗೆ ಅವರು ಕಾಣಿಸಿಕೊಳ್ಳುತ್ತಾರೆ ಎಂದು ಬಿಜೆಪಿ ಎಂಎಲ್ಸಿ ಪರಿಣಯ್ ಫುಕೆ ಅವರು ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ಮರಾಠ ಸಮುದಾಯಕ್ಕೆ ನೀಡಿದ್ದ ಭರವಸೆಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ಮನೋಜ್ ಜರಾಂಗೆ ಅವರು ಆಗಸ್ಟ್ 29 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
‘ಅವರು ಈಗ ಶರದ್ ಪವಾರ್ ಅವರ ಹಿಡಿತದಲ್ಲಿದ್ದಾರೆ, ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ’ ಎಂದು ಪರಿಣಯ್ ಫುಕೆ ಆರೋಪಿಸಿದ್ದಾರೆ.
ದೇವೇಂದ್ರ ಫಡಣವೀಸ್ ಅವರು ಮರಾಠರಿಗೆ ಮೀಸಲಾತಿ ನೀಡಿದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಜರಾಂಗೆ ಅವರಿಗೆ ಮರಾಠರಿಗೆ ಮೀಸಲಾತಿ ಸಿಗುವುದು ಬೇಕಾಗಿಲ್ಲ. ಮರಾಠ ಮತ್ತು ಇತರ ಸಮುದಾಯಗಳ ನಡುವೆ ಒಡಕು ಮೂಡಿಸುವ ಪ್ರಯತ್ನದಲ್ಲಿ ಅವರಿದ್ದಾರೆ ಎಂದಿದ್ದಾರೆ.
ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಸೇರಿದಂತೆ ಸರ್ಕಾರದಲ್ಲಿರುವ ಎಲ್ಲಾ ಮರಾಠ ನಾಯಕರ ರಾಜಕೀಯ ಜೀವನವನ್ನು ಕೊನೆಗಾಣಿಸಲು ದೇವೇಂದ್ರ ಫಡಣವೀಸ್ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಕಳೆದ ವಾರವಷ್ಟೇ ಮನೋಜ್ ಜರಾಂಗೆ ಆರೋಪಿಸಿದ್ದರು. ಇದರ ನಂತರ ಹಲವು ಬಿಜೆಪಿ ನಾಯಕರು ಜರಾಂಗೆ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.