ನವದೆಹಲಿ: ವ್ಯಕ್ತಿ ವಿರುದ್ಧ ಸುಳ್ಳು ದೂರು ನೀಡಿ ಕ್ರಿಮಿನಲ್ ಪ್ರಕರಣ ದಾಖಲಿಸುವುದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲು ಹಾಗೂ ಇಂಥ ಪ್ರಕರಣಗಳಲ್ಲಿ ಬಲಿಪಶು ಆಗುವವರಿಗೆ ಪರಿಹಾರ ನೀಡುವ ಸಂಬಂಧ ಮಾರ್ಗಸೂಚಿಗಳನ್ನು ರಚಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ಮುಖಂಡ ಕಪಿಲ್ ಶರ್ಮಾ ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ.
ಅತ್ಯಾಚಾರ ಪ್ರಕರಣವೊಂದರಲ್ಲಿ ಶಿಕ್ಷೆಗೆ ಒಳಗಾಗಿದ್ದ ವಿಷ್ಣು ತಿವಾರಿ ಅವರನ್ನು ನಿರಪರಾಧಿ ಎಂದು ಅಲಹಾಬಾದ್ ಹೈಕೋರ್ಟ್ ಕಳೆದ ಜ. 28ರಂದು ತೀರ್ಪು ನೀಡಿದೆ. ಭೂವಿವಾದಕ್ಕೆ ಸಂಬಂಧಪಟ್ಟಂತೆ ತಿವಾರಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು ಎಂದೂ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಶರ್ಮಾ ಅವರು, ವಕೀಲ ಅಶ್ವನಿಕುಮಾರ್ ದುಬೆ ಅವರ ಮೂಲಕ ಪಿಐಎಲ್ ಸಲ್ಲಿಸಿದ್ದಾರೆ.
ಅತ್ಯಾಚಾರ ಹಾಗೂ ದೌರ್ಜನ್ಯ ಎಸಗಿದ ಆರೋಪದ ಮೇಲೆ ತಿವಾರಿ ಅವರನ್ನು 2000 ಸೆಪ್ಟೆಂಬರ್ 16ರಂದು ಬಂಧಿಸಲಾಗಿತ್ತು. ನಂತರ ಶಿಕ್ಷೆಗೆ ಒಳಗಾಗಿದ್ದ ಅವರು 20 ವರ್ಷಗಳ ಕಾಲ ಜೈಲುವಾಸ ಅನುಭವಿಸಿದರು.
‘ಯಾವುದೇ ತಪ್ಪು ಮಾಡದಿದ್ದರೂ, ಸುಳ್ಳು ಪ್ರಕರಣ ದಾಖಲಿಸಿ ತಿವಾರಿ ಅವರಿಗೆ ಶಿಕ್ಷೆ ನೀಡಲಾಯಿತು. ಹೀಗಾಗಿ ಅವರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದೂ ಶರ್ಮಾ ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.