ADVERTISEMENT

ರಾಹುಲ್ ಗಾಂಧಿ ವಲಸೆ ನಾಯಕ: ಕೇರಳ ಚುನಾವಣೆ ಉಸ್ತುವಾರಿ ಪ್ರಲ್ಹಾದ ಜೋಶಿ ಟೀಕೆ

ಪಿಟಿಐ
Published 16 ಫೆಬ್ರುವರಿ 2021, 12:55 IST
Last Updated 16 ಫೆಬ್ರುವರಿ 2021, 12:55 IST
ಪ್ರಲ್ಹಾದ ಜೋಶಿ ಹಾಗೂ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ಪ್ರಲ್ಹಾದ ಜೋಶಿ ಹಾಗೂ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)   

ತ್ರಿಶೂರ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಲಸೆ ನಾಯಕ. ಹಿಂದೊಮ್ಮೆ ತಮ್ಮ ಕುಟುಂಬದ ಹಿಡಿತದಲ್ಲಿದ್ದ ಲೋಕಸಭಾ ಕ್ಷೇತ್ರ ಅಮೇಠಿಯಲ್ಲೇ ಸೋತು ಕೇರಳದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ, ಕೇರಳ ಚುನಾವಣೆ ಉಸ್ತುವಾರಿ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರವಾಗಿ ಕಾಂಗ್ರೆಸ್‌ನ ರಾಜ್ಯ ನಾಯಕತ್ವ ಮತ್ತು ರಾಷ್ಟ್ರೀಯ ನಾಯಕತ್ವ ಭಿನ್ನ ನಿಲುವುಗಳನ್ನು ಹೊಂದಿವೆ. ನಂಬಿಕೆಗೆ ಸಂಬಂಧಿಸಿದ ಈ ವಿಚಾರದ ಬಗ್ಗೆ ವಯನಾಡ್‌ನ ಸಂಸದರಾಗಿರುವ ರಾಹುಲ್ ಗಾಂಧಿ ಅವರು ನಿಲುವು ಸ್ಪಷ್ಟಪಡಿಸಲಿ ಎಂದು ಜೋಶಿ ಒತ್ತಾಯಿಸಿದ್ದಾರೆ.

ಫೆಬ್ರುವರಿ 21ರಂದು ಕಾಸರಗೋಡಿನಿಂದ ಆರಂಭವಾಗಲಿರುವ ಬಿಜೆಪಿಯ ‘ವಿಜಯ ಯಾತ್ರೆ’ಯ ಸಿದ್ಧತೆಗಳ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂರು ಬಾರಿ ಸಂಸದನಾಗಿ ಆಯ್ಕೆಯಾದ ಬಳಿಕವೂ ಅಮೇಠಿಯ ಅಭಿವೃದ್ಧಿಗೆ ರಾಹುಲ್ ಏನೂ ಮಾಡಿಲ್ಲ. ಅಲ್ಲಿ ಏನೂ ಅಭಿವೃದ್ಧಿಯಾಗಿಲ್ಲ. ಅಲ್ಲಿನ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಎಕ್ಸ್‌–ರೇ ಯಂತ್ರ ಕೂಡ ಇಲ್ಲ’ ಎಂದು ಹೇಳಿದ್ದಾರೆ.

ಅಲ್ಲಿ (ಅಮೇಠಿ) ತಿರಸ್ಕೃತಗೊಂಡ ರಾಹುಲ್ ಕೇರಳದಲ್ಲಿ ಆಶ್ರಯ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರಿಂದ ತಮಗೆ ಏನೂ ದೊರೆಯುವುದಿಲ್ಲ ಎಂಬುದನ್ನು ರಾಜ್ಯದ ಜನರು ಅರ್ಥಮಾಡಿಕೊಳ್ಳಲಿದ್ದಾರೆ ಎಂದೂ ಜೋಶಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.