ಕೋಲ್ಕತ್ತ: ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ಬಿಧನ್ ನಗರ ಪಾಲಿಕೆಯ (ಬಿಎಂಸಿ) ಮಾಜಿ ಮೇಯರ್ ಸವ್ಯಸಾಚಿ ದತ್ತ ಗುರುವಾರ ಮತ್ತೆ ಟಿಎಂಸಿ ಪಕ್ಷಕ್ಕೆ ಮರಳಿದ್ದಾರೆ.
ಸವ್ಯಸಾಚಿ ಅವರು ಎರಡು ವರ್ಷಗಳ ಹಿಂದೆ ಬಿಜೆಪಿ ಸೇರಲು ಟಿಎಂಸಿ ಪಕ್ಷವನ್ನು ತೊರೆದಿದ್ದರು.
ಬಿಜೆಪಿ ಎಲ್ಲೆಲ್ಲಿ ಅಧಿಕಾರದಲ್ಲಿಯೋ ಅಲ್ಲೆಲ್ಲ ತಾಲಿಬಾನ್ ಮಾದರಿ ಸರ್ಕಾರ ನಡೆಸುತ್ತಿದೆ ಎಂದು ಸವ್ಯಸಾಚಿ ದತ್ತ ಆರೋಪಿಸಿದ್ದಾರೆ.
ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಪುಟ ಸಚಿವ ಪಾರ್ಥ ಚಟರ್ಜಿ ಅವರು ತಮ್ಮ ಕಚೇರಿಯಲ್ಲಿ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಸವ್ಯಸಾಚಿ ಅವರನ್ನು ಸ್ವಾಗತಿಸಿದರು.
‘ನಮ್ಮ ನಾಯಕಿ ಮಮತಾ ಬ್ಯಾನರ್ಜಿ ಅವರು ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಸವ್ಯಸಾಚಿ ಅವರ ಕೋರಿಕೆಯಂತೆ ನಾವು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡೆವು. ಅವರ ಸೇರ್ಪಡೆಗೆ ಮಮತಾ ಅವರು ಅನುಮೋದನೆ ನೀಡಿದ್ದಾರೆ’ ಎಂದು ಚಟರ್ಜಿ ಹೇಳಿದರು.
ಟಿಎಂಸಿ ನೀಡುವ ಯಾವುದೇ ಜವಾಬ್ದಾರಿಯನ್ನು ವಿನಮ್ರವಾಗಿ ನಿಭಾಯಿಸುವುದಾಗಿ ಸವ್ಯಸಾಚಿ ಹೇಳಿದರು.
‘ಕೆಲವು ತಪ್ಪು ತಿಳುವಳಿಕೆಗಳಿಂದ ನಾನು ಟಿಎಂಸಿ ತೊರೆಯಬೇಕಾಯಿತು. ಆದರೆ ಅದೆಲ್ಲ ಈಗ ನಿವಾರಣೆಯಾಗಿದೆ. ಟಿಎಂಸಿ ಜೊತೆ ಇಂದು ನನ್ನ ಹೊಸ ಪ್ರಯಾಣ ಆರಂಭವಾಗಿದೆ’ ಎಂದೂ ಹೇಳಿದರು.
ಬಿಜೆಪಿಯ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಸಹ ಕಳೆದ ತಿಂಗಳು ಟಿಎಂಸಿ ಸೇರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.