ADVERTISEMENT

ಬಿಜೆಪಿ ನಾಯಕ ಸೌಮೇಂದು ಅಧಿಕಾರಿ ಕಾರಿನ ಮೇಲೆ ದಾಳಿ, ಟಿಎಂಸಿ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 11:36 IST
Last Updated 27 ಮಾರ್ಚ್ 2021, 11:36 IST
   

ಪುರ್ಬಾ ಮೇದಿನಿಪುರ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುವೇಂದು ಅಧಿಕಾರಿಯ ಸಹೋದರ ಸೌಮೇಂದು ಅಧಿಕಾರಿಯ ಕಾರಿಗೆ ಕಾಂಟೈನ ಸಬಾಜ್‌ಪುಟ್ ಪ್ರದೇಶದಲ್ಲಿ ದುಷ್ಕರ್ಮಿಗಳು ದಾಳಿಮಾಡಿದ್ದಾರೆ ಮತ್ತು ಅವರ ಚಾಲಕನನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯರು ಥಳಿಸಿದ್ದಾರೆ.

ಟಿಎಂಸಿ ಬ್ಲಾಕ್ ಅಧ್ಯಕ್ಷ ರಾಮ್ ಗೋವಿಂದ್ ದಾಸ್ ಈ ದಾಳಿಯನ್ನು ಆಯೋಜಿಸಿದ್ದಾರೆ ಮತ್ತು ಅವರು ಮೂರು ಬೂತ್‌ಗಳಲ್ಲಿ ಅಕ್ರಮ ಮತದಾನದಲ್ಲಿ ಭಾಗಿಯಾಗಿದ್ದಾರೆ ಎಂದು ಸೌಮೇಂದು ಮತ್ತು ಅವರ ಸಹೋದರ ದಿಬಿಯೇಂದು ಅಧಿಕಾರಿ ಆರೋಪಿಸಿದ್ದಾರೆ. ಈಮಧ್ಯೆ, ಘಟನೆಯಲ್ಲಿ ಸೌಮೇಂದು ಅವರಿಗೆ ಗಾಯವಾಗಿಲ್ಲ.

ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, 'ಟಿಎಂಸಿ ಬ್ಲಾಕ್ ಅಧ್ಯಕ್ಷ ರಾಮ್ ಗೋವಿಂದ್ ದಾಸ್ ಮತ್ತು ಅವರ ಪತ್ನಿ ನೇತೃತ್ವದಲ್ಲಿ ಮೂರು ಮತ ಕೇಂದ್ರಗಳಲ್ಲಿ ಅಕ್ರಮ ಮತದಾನ ನಡೆಯುತ್ತಿದೆ. ನಾನು ಇಲ್ಲಿಗೆ ಬಂದಿದ್ದರಿಂದಾಗಿ ಅವರ ಕಿಡಿಗೇಡಿತನವನ್ನು ಮುಂದುವರಿಸಲು ಸಮಸ್ಯೆ ಉಂಟಾಯಿತು. ಇದರಿಂದಾಗಿ ಅವರು ನನ್ನ ಕಾರಿನ ಮೇಲೆ ದಾಳಿ ಮಾಡಿದರು ಮತ್ತು ನನ್ನ ಚಾಲಕನನ್ನು ಥಳಿಸಿದರು' ಎಂದು ಹೇಳಿದರು.

ADVERTISEMENT

ದಿಬಿಯೇಂದು ಮಾತನಾಡಿ, ಟಿಎಂಸಿ ಬ್ಲಾಕ್ ಅಧ್ಯಕ್ಷ ರಾಮ್ ಗೋವಿಂದ್ ದಾಸ್ ಅವರ ಸಹಾಯದಿಂದ ಕೆಲವರು ಕಾರಿನ ಮೇಲೆ ದಾಳಿ ನಡೆಸಿ, ಚಾಲಕನನ್ನು ಥಳಿಸಿದ್ದಾರೆ. ಅಕ್ರಮ ಮತದಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಮತ್ತು ಈ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ (ಇಸಿ) ದೂರು ನೀಡುತ್ತೇನೆ' ಎಂದಿದ್ದಾರೆ.

ಸಿಪಿಐಎಂ ಅಭ್ಯರ್ಥಿ ಗಾರ್ಬೆಟಾ ಸುಶಾಂತಾ ಘೋಷ್ ಅವರ ಮೇಲಿನ ದಾಳಿಯನ್ನು ನೆನಪಿಸಿಕೊಂಡ ಅವರು, ದಾಳಿಯು 'ದುರದೃಷ್ಟಕರ' ಎಂದು ಹೇಳಿದರು.

ಸೌಮೇಂದು ಅವರೊಂದಿಗೆ ಮಾತನಾಡುವಾಗ ಕೆಲವು 'ಬೋಹಿರಗಾಟೊ' (ಹೊರಗಿನ) ಗೂಂಡಾಗಳು ಇದ್ದಕ್ಕಿದ್ದಂತೆ ಅವರ ಮೇಲೆ ಹಲ್ಲೆ ಮಾಡಿದರು ಎಂದು ಚಾಲಕ ರಾಮನ್ ದಾಸ್ ಆರೋಪಿಸಿದ್ದಾರೆ.

ವಿಧಾನಸಭಾ ಚುನಾವಣೆ ಸಮಯದಲ್ಲಿ ಹಿಂಸಾಚಾರದ ಇತಿಹಾಸ ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದ ವಿಧಾನಸಭಾ ಚುನಾವಣೆಯ ಪೈಕಿ ಮೊದಲ ಹಂತದ ಮತದಾನ ಶನಿವಾರ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿದ್ದು, ಮತದಾರರು 30 ಕ್ಷೇತ್ರಗಳಲ್ಲಿ 191 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.