ಚಂಡಿಗಡ: ಹರಿಯಾಣದ ರಿವಾರಿ ಸಾಮೂಹಿಕ ಅತ್ಯಾಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕಿ ಪ್ರೇಮಲತಾ, ನಿರುದ್ಯೋಗಿ ಯುವಕರು ಹತಾಶೆಗೊಂಡು ಇಂಥಾ ಕೃತ್ಯಗಳನ್ನು(ಅತ್ಯಾಚಾರ) ಮಾಡುತ್ತಾರೆ ಎಂದು ಹೇಳಿದ್ದಾರೆ.
ಇಲ್ಲಿನ ಉಚನಾ ಕಾಲನ್ ಶಾಸಕಿಯಾಗಿರುವಪ್ರೇಮಲತಾ ಕೇಂದ್ರ ಸಚಿವ ಬಿರೇಂದ್ರ ಸಿಂಹ ಅವರ ಪತ್ನಿಯಾಗಿದ್ದಾರೆ.
ಪ್ರೇಮಲತಾ ಹೇಳಿದ್ದೇನು?: ಹುಡುಗಿಯರನ್ನು ನೋಡಿದ ಕೂಡಲೇ ಗಂಡಸರ ದೃಷ್ಟಿ ಬದಲಾಗುತ್ತಿರುವ ಹೊಸ ವಿದ್ಯಮಾನ ಈಗ ಶುರುವಾಗಿದೆ. ಉದ್ಯೋಗ ಸಿಗದೆ ಹತಾಶೆಗೊಂಡ ಯುವಕರು ಅತ್ಯಾಚಾರ ಮಾಡುತ್ತಾರೆ.ಇಂಥಾ ಯುವಕರು ತಮ್ಮ ಭವಿಷ್ಯದ ಬಗ್ಗೆ ಯೋಚಿಸುವುದಿಲ್ಲ. ಇಂಥಾ ಕೃತ್ಯವೆಸಗಿದವರನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸುತ್ತಿದ್ದರೂ ಕಾನೂನು ಜಾರಿಯಾಗಲು ಸಮಯ ಬೇಕು ಎಂದು ಪ್ರೇಮಲತಾ ಹೇಳಿರುವುದಾಗಿ ಎಬಿಪಿ ನ್ಯೂಸ್ ವರದಿ ಮಾಡಿದೆ.
ಏನಿದು ಪ್ರಕರಣ?
ಹರಿಯಾಣದ 19ರ ಯುವತಿಯ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಕೆಲವು ವರ್ಷಗಳ ಹಿಂದೆ ಪ್ರಥಮ ಸ್ಥಾನ ಪಡೆದಿದ್ದ ಯುವತಿಗೆ ರಾಷ್ಟ್ರಪತಿಯಿಂದ ಪ್ರಶಸ್ತಿ ಕೂಡ ಲಭಿಸಿತ್ತು. ಕೋಚಿಂಗ್ ಕೇಂದ್ರಕ್ಕೆ ಹೋಗುತ್ತಿದ್ದ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ. ಮಹೀಂದರಗಡ ಜಿಲ್ಲೆಯಲ್ಲಿ ಈ ಕೃತ್ಯ ನಡೆದಿದೆ.
ಕೃತ್ಯ ನಡೆದು ಮೂರು ದಿನಗಳಾಗಿವೆ. ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸಂತ್ರಸ್ತೆ ಮತ್ತು ಅವರ ಕುಟುಂಬವು ಕಚೇರಿಯಿಂದ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಆರೋಪಿಗಳ ಹೆಸರನ್ನು ಸಂತ್ರಸ್ತೆ ತಿಳಿಸಿದ್ದಾರೆ. ಹಾಗಿದ್ದರೂ ಈವರೆಗೆ ಬಂಧನ ಆಗಿಲ್ಲ.
ಹೇಳಿಕೆ ನೀಡಲು ಸ್ಥಳೀಯ ಪೊಲೀಸ್ ಠಾಣೆಗೆ ಬರುವಂತೆ ಯುವತಿಗೆ ತಿಳಿಸಲಾಗಿತ್ತು. ಆದರೆ ಅಲ್ಲಿ ಗಂಟೆಗಟ್ಟಲೆ ಕಾಯುವಂತೆ ಮಾಡಲಾಯಿತು ಎಂದು ಯುವತಿಯ ಕುಟುಂಬ ಆರೋಪಿಸಿದೆ.
ತಮ್ಮ ಗ್ರಾಮದ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಕಾರಿನಲ್ಲಿ ಬಂದ ಇಬ್ಬರು ತಮ್ಮನ್ನು ಅಪಹರಿಸಿದರು. ಮತ್ತು ಬರಿಸುವ ಪಾನೀಯ ಕುಡಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾರೆ.
ಸಂತ್ರಸ್ತೆಯು ದೂರು ನೀಡಲು ರಿವಾರಿ ಪೊಲೀಸ್ ಠಾಣೆಗೆ ಹೋದಾಗ ಇದು ತಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಪೊಲೀಸರು ವಾಪಸ್ ಕಳುಹಿಸಿದ್ದರು. ಮರುದಿನ ಪ್ರಕರಣವನ್ನು ಕನಿನಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ಆರೋಪಿಗಳ ಬಂಧನಕ್ಕೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.