ADVERTISEMENT

ಕಾಂಗ್ರೆಸ್ ‘ಗೃಹಲಕ್ಷ್ಮಿ’ ಬಗ್ಗೆ ಗೇಲಿ ಮಾಡಿದ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2023, 13:10 IST
Last Updated 16 ಜನವರಿ 2023, 13:10 IST
‘ಗೃಹಲಕ್ಷ್ಮಿ’ ಪೋಸ್ಟರ್ ಬಿಡುಗಡೆ ಮಾಡಿದ ಡಿ.ಕೆ ಶಿವಕುಮಾರ್‌, ಪ್ರಿಯಾಂಕಾ ಗಾಂಧಿ ಮತ್ತು ಸಿದ್ದರಾಮಯ್ಯ
‘ಗೃಹಲಕ್ಷ್ಮಿ’ ಪೋಸ್ಟರ್ ಬಿಡುಗಡೆ ಮಾಡಿದ ಡಿ.ಕೆ ಶಿವಕುಮಾರ್‌, ಪ್ರಿಯಾಂಕಾ ಗಾಂಧಿ ಮತ್ತು ಸಿದ್ದರಾಮಯ್ಯ    

ಬೆಂಗಳೂರು: ಗೃಹಲಕ್ಷ್ಮೀ ಕಾರ್ಯಕ್ರಮದ ಮೂಲಕ ರಾಜ್ಯದ ಯಜಮಾನಿಗೆ ಮಾಸಿಕ ₹2,000 ನೀಡುವ ಕಾಂಗ್ರೆಸ್‌ನ ಭರವಸೆಯನ್ನು ಬಿಜೆಪಿ ಸೋಮವಾರ ಗೇಲಿ ಮಾಡಿದೆ.

ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಈ ಕಾರ್ಯಕ್ರಮವನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ಸೋಮವಾರ ಬೆಂಗಳೂರಿನಲ್ಲಿ ನಡೆದ ‘ನಾ ನಾಯಕಿ’ ಕಾರ್ಯಕ್ರದಮದಲ್ಲಿ ಘೋಷಿಸಿತು. ಕಾರ್ಯಕ್ರಮದ ಚೆಕ್ ಪ್ರತಿಕೃತಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ರಾಜ್ಯ ನಾಯಕರು ಹಸ್ತಾಂತರಿಸಿದರು.

ಇದರ ಬಗ್ಗೆ ವ್ಯಂಗ್ಯ ಮಾಡಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಸಬಲೀಕರಣ ಬಿಡಿ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳನ್ನೇ ಎಂದೂ ಪ್ರಶ್ನಿಸದ ಪ್ರಿಯಾಂಕಾ ಗಾಂಧಿ ಇದೀಗ ಗೃಹಲಕ್ಷ್ಮಿ ಎಂಬ ಯೋಜನೆ ಜಾರಿಗೊಳಿಸುತ್ತೇವೆ ಎಂದಿರುವುದು ಕಾಂಗ್ರೆಸ್’ನ ಗ್ಯಾರಂಟಿ ಸುಳ್ಳಿನ ಸರಣಿಯ ಮುಂದುವರಿದ ಭಾಗ. ಈ ಡೋಂಗಿತನದ ಅರಿವು ರಾಜ್ಯದ ಜನರಿಗಿದೆ’ ಎಂದು ಹೇಳಿದೆ.

ADVERTISEMENT

ಅಧಿಕಾರಕ್ಕೆ ಬಂದರೆ ಈಡೇರಿಸುವುದಾಗಿ ಕಾಂಗ್ರೆಸ್‌ ಘೋಷಿಸಿದ ಎರಡನೇ ಕಾರ್ಯಕ್ರಮವಿದು. ಇದಕ್ಕೂ ಮೊದಲು 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಕಾರ್ಯಕ್ರಮವನ್ನು ಕಾಂಗ್ರೆಸ್‌ ಘೋಷಿಸಿದೆ. ಇದರ ಬಗ್ಗೆಯೂ ಬಿಜೆಪಿ ಕುಹಕವಾಡಿದೆ.

ಇಂಧನ ಸಚಿವ ಸುನಿಲ್‌ ಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಡುವೆ ಒಂದು ಹಂತದ ವಾಗ್ವಾದವೂ ನಡೆದಿದೆ.

ಉಚಿತ ವಿದ್ಯುತ್ ಎಂಬುದು ಕಾಂಗ್ರೆಸ್‌ನ ಸುಳ್ಳು ಡಂಗುರ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಇಲಾಖೆಯನ್ನು ಲಾಭದ ಹಳಿಗೆ ತಂದು ಜನರಿಗೆ 200 ಯುನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ಪೂರೈಸಲಾಗುವುದು. ಉದ್ಘಾಟನಾ ಸಮಾರಂಭಕ್ಕೆ ಸುನಿಲ್‌ ಅವರನ್ನೂ ಆಹ್ವಾನಿಸುತ್ತೇವೆ ಎಂದಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.