ADVERTISEMENT

‘ವ್ಯಾಕ್ಯೂಮ್ ಕ್ಲೀನರ್’ ಬಳಸಿ ಜಮ್ಮು–ಕಾಶ್ಮೀರ ಶುಚಿಗೊಳಿಸುತ್ತೇವೆ: ಬಿಜೆಪಿ ಸಂಸದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮಾರ್ಚ್ 2022, 13:14 IST
Last Updated 22 ಮಾರ್ಚ್ 2022, 13:14 IST
ಸುಧಾಂಶು ತ್ರಿವೇದಿ (ಕೃಪೆ – ಸಂಸದ್ ಟಿವಿ)
ಸುಧಾಂಶು ತ್ರಿವೇದಿ (ಕೃಪೆ – ಸಂಸದ್ ಟಿವಿ)   

ನವದೆಹಲಿ: ಉತ್ತರ ಪ್ರದೇಶದಲ್ಲಿ ಬುಲ್ಡೋಜರ್‌ ಬಳಸಿದಂತೆ ಜಮ್ಮು–ಕಾಶ್ಮೀರದಲ್ಲಿ ವ್ಯಾಕ್ಯೂಮ್ ಕ್ಲೀನರ್ ಬಳಸಿ ಶುಚಿಗೊಳಿಸುತ್ತೇವೆ ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಜಮ್ಮು–ಕಾಶ್ಮೀರವನ್ನು ವ್ಯಾಕ್ಯೂಮ್ ಕ್ಲೀನರ್ ಬಳಸಿ ಶುಚಿಗೊಳಿಸುತ್ತೇವೆ. ಆ ಪ್ರದೇಶದಲ್ಲಿ ಶಾಂತಿಗೆ ಭಂಗ ತರುವವರನ್ನೆಲ್ಲ ತೊಡೆದುಹಾಕುತ್ತೇವೆ ಎಂದು ಹೇಳಿದ್ದಾರೆ.

ಪ್ರತಿಪಕ್ಷಗಳು ಜಾತ್ಯತೀತತೆಯ ನೆಲೆಗಟ್ಟಿನಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿವೆ. ಆದರೆ ಅದನ್ನೀಗ ರಾಷ್ಟ್ರೀಯತೆಯ ವಿರುದ್ಧ ಎತ್ತಿಕಟ್ಟಲಾಗಿದೆ ಎಂದು ಅವರು ಟೀಕಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಸರಿನ ಜತೆ ‘ಬುಲ್ಡೋಜರ್’ ಎಂಬ ಪದ ಥಳಕು ಹಾಕಿಕೊಂಡಿತ್ತು. ಈ ಪದವನ್ನು ವಿರೋಧ ಪಕ್ಷಗಳು ಯೋಗಿ ಅವರನ್ನು ಟೀಕಿಸಲು ಬಳಸಿದ್ದರೆ ಬಿಜೆಪಿಯು ಸಮರ್ಥನೆಗೆ ಬಳಸಿಕೊಂಡಿತ್ತು.

ಜಮ್ಮು–ಕಾಶ್ಮೀರ ಬಜೆಟ್‌ಗೆ ಮೆಚ್ಚುಗೆ: ಜಮ್ಮು–ಕಾಶ್ಮೀರ ಬಜೆಟ್ ಅಭಿವೃದ್ಧಿಯ ಆಶಯ ಹೊಂದಿದೆ ಎಂದು ಸುಧಾಂಶು ತ್ರಿವೇದಿ ಅಭಿಪ್ರಾಯಪಟ್ಟಿದ್ದಾರೆ. ಕಾಶ್ಮೀರದಲ್ಲಿ ಉಗ್ರ ಅಫ್ಜಲ್ ಗುರು ಹಾಗೂ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿರುವ ಉದಾಹರಣೆಗಳನ್ನು ಅವರು ರಾಜ್ಯಸಭೆಯಲ್ಲಿ ಉಲ್ಲೇಖಿಸಿದ್ದಾರೆ.

ಪಾಕ್‌ಗೆ ನಖ್ವಿ ಚಾಟಿ: ನೆರೆ ರಾಷ್ಟ್ರವು ಕಾಶ್ಮೀರದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸುತ್ತಿದೆ. ಮಾನವಹಕ್ಕುಗಳು ಕೇವಲ ಪ್ರತ್ಯೇಕತಾವಾದಿಗಳಿಗೆ, ಭಯೋತ್ಪಾದಕರಿಗೆ ಸಂಬಂಧಿಸಿದ್ದಲ್ಲ ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.