ನವದೆಹಲಿ: ಬ್ಯಾಂಕ್ಗಳು ಮತ್ತು ರೈಲ್ವೆ ಖಾಸಗೀಕರಣದಿಂದ ಐದು ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಆಡಳಿತಾರೂಢ ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.
ಖಾಸಗೀಕರಣಕ್ಕೆ ಸಂಬಂಧಿಸಿ ಟ್ವೀಟ್ ಮಾಡಿರುವ ಅವರು, ‘ಸಾರ್ವಜನಿಕರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾದ ಸರ್ಕಾರ ಸಾಮಾಜಿಕ ಅಸಮಾನತೆ ಸೃಷ್ಟಿಸಿ ಬಂಡವಾಳಶಾಹಿಯನ್ನು ಉತ್ತೇಜಿಸಬಾರದು’ ಎಂದು ಉಲ್ಲೇಖಿಸಿದ್ದಾರೆ.
‘ಬ್ಯಾಂಕ್ಗಳು ಮತ್ತು ರೈಲ್ವೆ ಖಾಸಗೀಕರಣದಿಂದ ಐದು ಲಕ್ಷ ಮಂದಿ ಬಲವಂತವಾಗಿ ನಿವೃತ್ತಿಯಾಗಬೇಕಾಗುತ್ತದೆ. ಅಂದರೆ ಅಷ್ಟೂ ಮಂದಿ ಕೆಲಸ ಕಳೆದುಕೊಂಡಂತೆ’ ಎಂದು ಅವರು ಹೇಳಿದ್ದಾರೆ.
‘ಪ್ರತಿಯೊಂದು ಉದ್ಯೋಗ ನಷ್ಟವೂ ಲಕ್ಷಾಂತರ ಕುಟುಂಬಗಳು ಭರವಸೆಯನ್ನೇ ಕಳೆದುಕೊಳ್ಳುವಂತೆ ಮಾಡಲಿದೆ’ ಎಂದು ಅವರು ಉಲ್ಲೇಖಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ವರುಣ್ ಗಾಂಧಿ ಅವರು ಕೃಷಿ ಕಾಯ್ದೆಗಳು, ಹಣದುಬ್ಬರ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿದ್ದಾರೆ. ಆದರೆ, ಇದು ಬಿಜೆಪಿಯ ಅಧಿಕೃತ ನಿಲುವಲ್ಲ.
ಇದನ್ನೂ ಓದಿ:ಬಲಿಷ್ಠ ಸರ್ಕಾರ ಬೇಕಿದೆ: ವರುಣ್ ಗಾಂಧಿ
ಏರಿಕೆಯಾಗುತ್ತಿರುವ ಹಣದುಬ್ಬರ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣದ ಬಗ್ಗೆ ಕಳೆದ ತಿಂಗಳು ತಮ್ಮ ಲೋಕಸಭಾ ಕ್ಷೇತ್ರ ಫಿಲಿಭಿತ್ನಲ್ಲಿ ಪ್ರಸ್ತಾಪಿಸಿದ್ದ ಅವರು, ದೇಶದ ಪ್ರಮುಖ ಸಂಪನ್ಮೂಲಗಳನ್ನು ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.