ADVERTISEMENT

ಬಿಜೆಪಿಗೆ ಸಲಹೆಗಾರರೇ ಬೇಕಾಗಿಲ್ಲ: ಕಾಂಗ್ರೆಸ್ ಲೇವಡಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 20:23 IST
Last Updated 23 ಫೆಬ್ರುವರಿ 2019, 20:23 IST
ಪಿ.ಚಿದಂಬರಂ
ಪಿ.ಚಿದಂಬರಂ    

ನವದೆಹಲಿ: ‘ಬಿಜೆಪಿಯಲ್ಲಿ ನರೇಂದ್ರ ಮೋದಿ ಇರುವುದರಿಂದ ಆ ಪಕ್ಷಕ್ಕೆ ಸಲಹೆಗಾರರೇ ಬೇಕಾಗಿಲ್ಲ’ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಲೇವಡಿ ಮಾಡಿದ್ದಾರೆ.

ನಿರ್ದಿಷ್ಟ ದಾಳಿಯ ರೂವಾರಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ ಅವರನ್ನು ರಾಷ್ಟ್ರೀಯ ಭದ್ರತಾ ಮುನ್ನೋಟ ಸಿದ್ಧಪಡಿಸಲು ಕಾಂಗ್ರೆಸ್‌ ನೇಮಕ ಮಾಡಿಕೊಂಡಿದ್ದನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಟೀಕಿಸಿದ್ದರು. ಇದಕ್ಕೆ ಚಿದಂಬರಂ ತಿರುಗೇಟು ನೀಡಿದ್ದಾರೆ.

‘ಬಿಜೆಪಿಯಲ್ಲಿ ಮೋದಿ ಇದ್ದಾರೆ. ಹೀಗಾಗಿ ನಮ್ಮ ಪಕ್ಷಕ್ಕೆ ಸಲಹೆಗಾರರೇ ಬೇಕಾಗಿಲ್ಲ ಎಂಬ ಮಾತನ್ನೂ ಜೇಟ್ಲಿ ಹೇಳಬೇಕಿತ್ತು’ ಎಂದು ಅವರು ಲೇವಡಿ ಮಾಡಿದ್ದಾರೆ.

ADVERTISEMENT

‘ಆರ್‌ಬಿಐ ಅನ್ನು ಮುನ್ನಡೆಸಲು ಡಾ.ರಘುರಾಂ ರಾಜನ್‌ ಅಂತಹವರು ಬಿಜೆಪಿಗೆ ಬೇಕಾಗಿಲ್ಲ, ಏಕೆಂದರೆ ಅಲ್ಲಿ ಮೋದಿ ಇದ್ದಾರೆ. ಬಿಜೆಪಿಗೆ ಯೋಜನಾ ಆಯೋಗವೂ ಬೇಕಿಲ್ಲ, ಏಕೆಂದರೆ ಅಲ್ಲಿ ಮೋದಿ ಇದ್ದಾರೆ. ಬಿಜೆಪಿಗೆ ರಾಷ್ಟ್ರೀಯ ಸಾಂಖ್ಯಿಕ ಆಯೋಗದ ಅವಶ್ಯಕತೆಯೂ ಇಲ್ಲ, ಏಕೆಂದರೆ ಅಲ್ಲಿ ಮೋದಿ ಇದ್ದಾರಲ್ಲ’ ಎಂದು ಅವರು ಟೀಕಿಸಿದ್ದಾರೆ.

‘ಸೇನಾ ಕಾರ್ಯಾಚರಣೆ ಮೂಲಕ ಎಲ್ಲವನ್ನೂ ನಿಯಂತ್ರಿಸುವ ಮೋದಿ ಸರ್ಕಾರದ ನೀತಿ ಕಾಶ್ಮೀರದಲ್ಲಿ ವಿಫಲವಾಗಿದೆ. ಈಶಾನ್ಯ ಭಾರತದಲ್ಲೂ ಈ ಸರ್ಕಾರ ಸೇನಾ ಕಾರ್ಯಾಚರಣೆಯ ಮೊರೆ ಹೋಗುತ್ತಿದೆ. ಅಲ್ಲಿಯೂ ಈ ನೀತಿ ವಿಫಲವಾಗಲಿದೆ’ ಎಂದು ಅವರು ಟೀಕಿಸಿದ್ದಾರೆ.

‘ಕಾಶ್ಮೀರಿ ವಸ್ತುಗಳನ್ನು ಬಹಿಷ್ಕರಿಸಿ ಎಂದು ಮೇಘಾಲಯದ ರಾಜ್ಯಪಾಲ ತತಾಗತ ರಾಯ್ ಹೇಳಿಕೆ ನೀಡಿದ್ದರು. ಅವರ ವಿರುದ್ಧ ನರೇಂದ್ರ ಮೋದಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಾಯುತ್ತಲೇ ಇದ್ದೇವೆ. ಆದರೆ ಪರಿಸ್ಥಿತಿ ಚಿಂತಾಜನಕವಾಗಿದೆ. ಕಾಶ್ಮೀರವು ಭಾರತದ ಭಾಗವಾಗಬೇಕು ಎಂದು ನಮ್ಮ ಜನರು ಬಯಸುತ್ತಾರೆ. ಆದರೆ ಕಾಶ್ಮೀರಿ ಜನರು ಭಾರತದ ಭಾಗವಾಗುವುದು ಬೇಕಾಗಿಲ್ಲ’ ಎಂದು ಅವರು ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.