ನವದೆಹಲಿ: ದೆಹಲಿಯಲ್ಲಿ ರೋಡ್ ಷೋ ನಡೆಸುತ್ತಿದ್ದ ವೇಳೆ ತಮ್ಮ ಮೇಲೆ ನಡೆದ ಹಲ್ಲೆಯ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, ‘ಇದು ದೆಹಲಿಯ ಜನರ ಮೇಲೆ ಮತ್ತು ಅವರು ನೀಡಿದ ತೀರ್ಪಿನ ಮೇಲೆ ನಡೆದ ಹಲ್ಲೆಯಾಗಿದೆ’ ಎಂದರು.
‘ಇದು ನನ್ನ ಮೇಲೆ ನಡೆದ ಒಂಬತ್ತನೆಯ ಮತ್ತು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆದ ಐದನೆಯ ಹಲ್ಲೆಯಾಗಿದೆ. ಇನ್ನು ಮುಂದೆ ನನ್ನ ಮೇಲೆ ನಡೆಯುವ ಎಲ್ಲ ಹಲ್ಲೆಗಳಿಗೂ ಬಿಜೆಪಿಯೇ ಹೊಣೆ. ಜನಸಾಮಾನ್ಯರು ರಾಜಕಾರಣಕ್ಕೆ ಬರುವುದನ್ನು ಬಿಜೆಪಿಯವರು ಇಷ್ಟಪಡುವುದಿಲ್ಲ. ಅದಕ್ಕಾಗಿ ಅವರು ನಮ್ಮನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ’ ಎಂದು ಕೇಜ್ರಿವಾಲ್ ಆರೋಪಿಸಿದರು.
ಈ ಆರೋಪವವನ್ನು ಅಲ್ಲಗಳೆದಿರುವ ಬಿಜೆಪಿ, ‘ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ಅಪ ಪ್ರಚಾರ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದೆ.
ಪಕ್ಷದ ಕಾರ್ಯವೈಖರಿಯಿಂದ ಅಸಂತುಷ್ಟರಾಗಿದ್ದ ಎಎಪಿ ಕಾರ್ಯಕರ್ತರೊಬ್ಬರು ಶನಿವಾರ ಕೇಜ್ರಿವಾಲ್ ಮೇಲೆ ಹಲ್ಲೆ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.