ADVERTISEMENT

ಭಯ, ದ್ವೇಷದ ವಾತಾವರಣ ಸೃಷ್ಟಿ: ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ರಾಹುಲ್ ವಾಗ್ದಾಳಿ

ಪಿಟಿಐ
Published 19 ಜನವರಿ 2023, 11:11 IST
Last Updated 19 ಜನವರಿ 2023, 11:11 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಪಠಾಣ್‌ಕೋಟ್: ಬಿಜೆಪಿ, ಆರ್‌ಎಸ್‌ಎಸ್ ದೇಶದಲ್ಲಿ ಭಯ, ದ್ವೇಷ ಮತ್ತು ಹಿಂಸಾಚಾರದ ವಾತಾವರಣ ಸೃಷ್ಟಿ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.

ಪಂಜಾಬ್‌ನಲ್ಲಿ ಭಾರತ್ ಜೋಡೊ ಯಾತ್ರೆಯ ಕೊನೆಯ ದಿನವಾದ ಗುರುವಾರ ಪಠಾಣ್‌ಕೋಟ್‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ದೇಶದ ಜನರಲ್ಲಿ ಭಯ, ದ್ವೇಷ ಹುಟ್ಟಿಸುವ ಬಿಜೆಪಿ ನೀತಿಯ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ-ಆರ್‌ಎಸ್‌ಎಸ್ ದೇಶದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ. ಒಂದು ಜಾತಿ ವಿರುದ್ಧ ಮತ್ತೊಂದು, ಒಂದು ಧರ್ಮದ ವಿರುದ್ಧ ಇನ್ನೊಂದು, ಒಂದು ಭಾಷೆಯ ವಿರುದ್ಧ ಮತ್ತೊಂದು ಹೋರಾಡುವಂತೆ ಮಾಡಿದೆ. ಬಿಜೆಪಿಯ ನೀತಿಗಳು ಒಂದಲ್ಲ ಒಂದು ರೀತಿಯಲ್ಲಿ ಭಯ ಹುಟ್ಟಿಸುವಂತೆ ಮಾಡಿವೆ ಎಂದು ಹೇಳಿದರು.

ಹಿಂದಿನ ಯುಪಿಎ ಸರ್ಕಾರದ ಯೋಜನೆಗಳನ್ನು ಉಲ್ಲೇಖ ಮಾಡಿದ ರಾಹುಲ್, ನಾವು ಭಯದ ವಾತಾವರಣವನ್ನು ತೊಡೆದು ಹಾಕಿದೆವು. ಮತ್ತೊಂದೆಡೆ ಬಿಜೆಪಿ ಭಯದ ವಾತಾವರಣ ಸೃಷ್ಟಿ ಮಾಡಿದೆ ಎಂದು ದೂರಿದರು.

ರೈತರ ಹಿತಕ್ಕಾಗಿ ಬಿಜೆಪಿ ಏನನ್ನೂ ಮಾಡಿಲ್ಲ. ಕೃಷಿ ಕಾನೂನು ಜಾರಿಗೆ ತಂದು ರೈತರಲ್ಲಿ ಭಯ ಹುಟ್ಟಿಸಿದರು ಎಂದು ಹೇಳಿದರು.

ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ, ನೋಟು ಅಮಾನ್ಯೀಕರಣ, ಜಿಎಸ್‌ಟಿ ವಿರುದ್ಧವೂ ರಾಹುಲ್ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.