ADVERTISEMENT

ಕೋವಿಡ್‌ ನಿರ್ವಹಣೆ, ಕೇಂದ್ರದಿಂದ ತಾರತಮ್ಯ: ಶಿವಸೇನೆ ತರಾಟೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 16:39 IST
Last Updated 2 ಡಿಸೆಂಬರ್ 2021, 16:39 IST
ವಿನಾಯಕ ರಾವುತ್
ವಿನಾಯಕ ರಾವುತ್   

ನವದೆಹಲಿ (ಪಿಟಿಐ): ‘ಕೋವಿಡ್‌–19 ಪರಿಸ್ಥಿತಿಯ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಿದ್ದು, ಬಿಜೆಪಿ ಆಡಳಿತವಿದ್ದ ರಾಜ್ಯಗಳ ಪರ ಒಲವು ತೋರಿತ್ತು‘ ಎಂದು ಶಿವಸೇನೆ ಲೋಕಸಭೆಯಲ್ಲಿ ಆರೋಪಿಸಿತು.

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ ನಾಯಕ ವಿನಾಯಕ ರಾವುತ್, ‘100 ಕೋಟಿ ಡೋಸ್ ಲಸಿಕೆ ನೀಡಿದ ಸಂಭ್ರಮಾಚರಣೆ ತರಾತುರಿಯಲ್ಲಿ ನಡೆಯಿತು. ಪಿಡುಗು ತೀವ್ರವಾಗಿದ್ದ 21 ತಿಂಗಳ ನಂತರ ಆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದೆ’ ಎಂದು ಟೀಕಿಸಿದರು.

ಓಮೈಕ್ರಾನ್ ರೂಪಾಂತರ ತಳಿ ಉಲ್ಲೇಖಿಸಿದ ಅವರು, ಇದರ ನಿರ್ವಹಣೆ ಕುರಿತು ರಾಜ್ಯಗಳು, ಕೇಂದ್ರ ಸರ್ಕಾರದ ನಡುವೆ ಉತ್ತಮ ಹೊಂದಾಣಿಕೆ ಅಗತ್ಯ. ಕೇಂದ್ರದ ಸೂಚನೆಯಲ್ಲಿ ಸ್ಪಷ್ಟತೆ ಇರಬೇಕು’ ಎಂದರು.

ADVERTISEMENT

ಕೇಂದ್ರ ಸರ್ಕಾರ ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಕಡಿಮೆ ಲಸಿಕೆಯನ್ನು ಹಂಚಿಕೆ ಮಾಡುತ್ತಿದೆ. 130 ಕೋಟಿ ಜನರ ಹೊಣೆ ಪ್ರಧಾನಮಂತ್ರಿಯದ್ದಾಗಿದೆ. ಜನಸಂಖ್ಯೆ ಆಧರಿಸಿ ಹಂಚಿಕೆ ಆಗಬೇಕು. ಚುನಾವಣೆ ನಡೆಯುತ್ತಿದೆ ಎಂದು ಉತ್ತರ ಪ್ರದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೆ ಮಾಡುವುದು ಸಲ್ಲದು ಎಂದು ಹೇಳಿದರು.

‘ದೇಶದಲ್ಲಿ ಸದ್ಯ, ಕೇವಲ ಶೇ 38ರಷ್ಟು ಜನರು ಮಾತ್ರವೇ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಇದರಿಂದಲೇ ನಾವು ತೃಪ್ತರಾಗಬೇಕು. 100 ಕೋಟಿ ಲಸಿಕೆ ಸಂಭ್ರಮ ತರಾತುರಿಯಲ್ಲಿ ಆಗಲಿಲ್ಲವೇ?’ ಎಂದು ರಾವುತ್ ಪ್ರಶ್ನಿಸಿದರು.

ಬಿಜೆಪಿಯ ರತನ್ ಲಾಲ್ ಕಟಾರಿಯ ಅವರು, ಹೊಸ ಕೋವಿಡ್‌ ತಳಿ ಕಾಣಿಸಿಕೊಳ್ಳುವ ಆತಂಕವಿದೆ. ಈ ಬಗ್ಗೆ ಎಚ್ಚರಿಕೆ ಅಗತ್ಯ. ಆರಾಮವಾಗಿ ಇರುವ ಸಮಯ ಇದಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.