ADVERTISEMENT

ತಮಿಳುನಾಡಿನಲ್ಲಿ ಮೈತ್ರಿಗೆ ಬಿಜೆಪಿ ಯತ್ನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2019, 18:31 IST
Last Updated 14 ಜನವರಿ 2019, 18:31 IST

ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ–ಕಾಂಗ್ರೆಸ್‌ ಮೈತ್ರಿಕೂಟದ ವಿರುದ್ಧ ಬಲವಾದ ಮೈತ್ರಿಕೂಟ ರೂಪಿಸಲು ಬಿಜೆಪಿ ಯತ್ನಿಸುತ್ತಿದೆ. ಈ ಬಗೆಗಿನ ಮಾತುಕತೆ ತಮಿಳುನಾಡು ಬಿಜೆಪಿ ಉಸ್ತುವಾರಿ ಪೀಯೂಷ್‌ ಗೋಯಲ್‌ ಮತ್ತು ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರ ನೇತೃತ್ವದಲ್ಲಿ ಶುಕ್ರವಾರ ಆರಂಭವಾಗಲಿದೆ.

ಬಿಜೆಪಿಗೆ ತಮಿಳುನಾಡಿನಲ್ಲಿ ದೊಡ್ಡ ನೆಲೆ ಇಲ್ಲ. ಎಐಎಡಿಎಂಕೆ, ಪಿಎಂಕೆ ಮತ್ತು ಡಿಎಂಡಿಕೆ ಜತೆ ಸೇರಿ ಮೈತ್ರಿಕೂಟ ರಚಿಸಿದರೆ ಡಿಎಂಕೆ–ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಪ್ರಬಲ ಸ್ಪರ್ಧೆ ಒಡ್ಡಬಹುದು ಎಂಬುದು ಬಿಜೆಪಿ ತಂತ್ರ.

ಎಐಎಡಿಎಂಕೆ, ಪಿಎಂಕೆ ಮತ್ತು ಡಿಎಂಡಿಕೆ ಜತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಉತ್ಸುಕವಾಗಿದೆ ಎಂಬುದನ್ನು ಈ ಪಕ್ಷಗಳ ನಾಯಕರಿಗೆ ಗೋಯಲ್‌ ಅವರು ತಿಳಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎಯಿಂದ ಎಐಎಡಿಎಂಕೆ 2004ರಲ್ಲಿ ಹೊರಗೆ ಬಂದಿತ್ತು. 2014ರ ಲೋಕಸಭಾ ಚುನಾವಣೆಯ ಬಳಿಕ ಪಿಎಂಕೆ ಮತ್ತು ಡಿಎಂಡಿಕೆ ಪ‍ಕ್ಷಗಳು ಬಿಜೆಪಿ ಜತೆಗಿನ ಸಂಬಂಧ ಕಡಿದುಕೊಂಡಿದ್ದವು.

ADVERTISEMENT

2014ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ 39 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕನ್ಯಾಕುಮಾರಿಯಿಂದ ಬಿಜೆಪಿಯ ಪೊನ್‌ ರಾಧಾಕೃಷ್ಣನ್‌ ಮತ್ತು ಧರ್ಮಪುರಿಯಿಂದ ಪಿಎಂಕೆಯ ಅನ್ಬುಮಣಿ ರಾಮದಾಸ್‌ ಗೆದ್ದಿದ್ದರು.

ಎಐಎಡಿಎಂಕೆ ಮುಖಂಡರ ಜತೆಗೆ ಕೆಲವು ಸುತ್ತಿನ ಮಾತುಕತೆ ದೆಹಲಿಯಲ್ಲಿ ನಡೆದಿದೆ. ಪಿಎಂಕೆ ಮತ್ತು ಡಿಎಂಡಿಕೆ ನಾಯಕರು ಮೈತ್ರಿಗೆ ಇನ್ನೂ ಒಪ್ಪಿಗೆ ಕೊಟ್ಟಿಲ್ಲ. ಮೈತ್ರಿ ಯಾಕೆ ಮುಖ್ಯ ಎಂಬುದನ್ನು ಈ ಮುಖಂಡರಿಗೆ ಮನವರಿಕೆ ಮಾಡಿಕೊಡುವುದು ಗೋಯಲ್‌ ಭೇಟಿಯ ಉದ್ದೇಶ ಎನ್ನಲಾಗಿದೆ.

ಜನಪ್ರಿಯ ನಾಯಕಿ ಜಯಲಲಿತಾ ಅವರ ನಿಧನದ ಬಳಿಕ ಎಐಎಡಿಎಂಕೆಯ ಜನಪ್ರಿಯತೆ ಕುಗ್ಗಿದೆ ಎಂಬ ಭಾವನೆ ಇದೆ. 2014ರ ಚುನಾ
ವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಮತ ಪ್ರಮಾಣ ಶೇ 18ರಷ್ಟಿತ್ತು. ಹಾಗಾಗಿ, ಎಐಎಡಿಎಂಕೆ ಮತ್ತು ಇತರ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡರೆ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಬಿಜೆಪಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.