ರಾಜಸ್ಥಾನ ಬಿಜೆಪಿ ಶಾಸಕ ಬಾಲಮುಕುಂದ ಆಚಾರ್ಯ ರಾಷ್ಟ್ರಧ್ವಜದಿಂದ ಮುಖ ಒರೆಸಿಕೊಳ್ಳುತ್ತಿರುವುದು
ಚಿತ್ರ: X/@rajasthanipapa
ಜೈಪುರ: ರಾಜಸ್ಥಾನದ ಬಿಜೆಪಿ ಶಾಸಕ ಬಾಲಮುಕುಂದ ಆಚಾರ್ಯ ಅವರು ರಾಷ್ಟ್ರಧ್ವಜದಿಂದ ಮುಖ ಒರೆಸಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಘಟನೆಯನ್ನು ಖಂಡಿಸಿರುವ ವಿರೋಧ ಪಕ್ಷ ಕಾಂಗ್ರೆಸ್, ಆಚಾರ್ಯ ವಿರುದ್ಧ ಕಿಡಿಕಾರಿದೆ.
ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ಕೈಗೊಂಡ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಗೌರವಾರ್ಥವಾಗಿ ನಡೆಸುತ್ತಿರುವ 'ತಿರಂಗಾ ಯಾತ್ರೆ' ಸಂದರ್ಭ ಆಚಾರ್ಯ ಅವರು ಮುಖ ಒರೆಸಿಕೊಂಡಿದ್ದಾರೆ.
ಜೈಪುರದ ಮಾರುಕಟ್ಟೆ, ಐತಿಹಾಸಿಕ ಸ್ಥಳಗಳಲ್ಲಿ ತಿರಂಗಾ ಯಾತ್ರೆ ಸಾಗಿತ್ತು. ಈ ಸಂದರ್ಭದಲ್ಲಿ, ಹವಾ ಮಹಲ್ ವಿಧಾನಸಭಾ ಕ್ಷೇತ್ರದ ಶಾಸಕ ಆಚಾರ್ಯ ಅವರು ಬಾವುಟದಿಂದ ಮುಖ ಒರೆಸಿಕೊಳ್ಳುತ್ತಿರುವುದು ವಿಡಿಯೊಗಳಲ್ಲಿ ದಾಖಲಾಗಿದೆ.
ಇದನ್ನು ಹಂಚಿಕೊಂಡಿರುವ ಕಾಂಗ್ರೆಸ್ ನಾಯಕರು, ಬಿಜೆಪಿಯು ದೇಶಭಕ್ತಿಯನ್ನು ರಾಜಕೀಯಗೊಳಿಸುತ್ತಿದ್ದು, ರಾಷ್ಟ್ರಧ್ವಜಕ್ಕೆ ಸಂಪೂರ್ಣ ಅಗೌರವ ತೋರಿದೆ ಎಂದು ಕಿಡಿಕಾರಿದ್ದಾರೆ.
'ಸೇನೆ ಮತ್ತು ರಾಷ್ಟ್ರಧ್ವಜವನ್ನು ಗೌರವಿಸುವ ಉದ್ದೇಶದಿಂದ ನಡೆದ ರ್ಯಾಲಿಯಲ್ಲಿ ಈ ರೀತಿ ನಡೆದುಕೊಂಡಿರುವುದು ಸಂವೇದನಾರಹಿತ ನಡೆ, ಅಗೌರವದ ಸಂಗತಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬಿಜೆಪಿ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.