ADVERTISEMENT

ಚಿನ್ಮಯಾನಂದ ವಿರುದ್ಧ ಆರೋಪ ಮಾಡಿದ ವಿದ್ಯಾರ್ಥಿನಿ ಬಂಧನಕ್ಕೆ ಪ್ರಿಯಾಂಕಾ ಖಂಡನೆ

ಅತ್ಯಾಚಾರ ಆರೋಪ ಪ್ರಕರಣ

ಪಿಟಿಐ
Published 26 ಸೆಪ್ಟೆಂಬರ್ 2019, 11:33 IST
Last Updated 26 ಸೆಪ್ಟೆಂಬರ್ 2019, 11:33 IST
ಪ್ರಿಯಾಂಕಾ ಗಾಂಧಿ (ಸಂಗ್ರಹ ಚಿತ್ರ)
ಪ್ರಿಯಾಂಕಾ ಗಾಂಧಿ (ಸಂಗ್ರಹ ಚಿತ್ರ)   

ನವದೆಹಲಿ: ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಕಾನೂನು ವಿದ್ಯಾರ್ಥಿನಿ ಬಂಧನವನ್ನು ಖಂಡಿಸಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ‘ಇದು, ಬಿಜೆಪಿ ನ್ಯಾಯ’ ಎಂದು ಟೀಕಿಸಿದ್ದಾರೆ.

ಚಿನ್ಮಯಾನಂದ ಅವರಿಂದ ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ಕಾನೂನು ವಿದ್ಯಾರ್ಥಿನಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜಾಮೀನು ಮನವಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಸದ್ಯ ಆಕೆ 14 ದಿನ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಉನ್ನಾವೊ ಮತ್ತು ಶಹಜಹಾಂಪುರ ಅತ್ಯಾಚಾರ ಪ್ರಕರಣಗಳನ್ನು ಪರಸ್ಪರ ಹೋಲಿಕೆ ಮಾಡಿರುವ ಪ್ರಿಯಾಂಕಾ ಗಾಂಧಿ, ಮೇಲಿನಂತೆ ವ್ಯಂಗ್ಯವಾಗಿ ಪ್ರಶ್ನಿಸಿ ಬುಧವಾರ ಟ್ವೀಟ್ ಮಾಡಿದ್ದಾರೆ.

ಉನ್ನಾವೊ ಪ್ರಕರಣದಲ್ಲಿ ಸಂತ್ರಸ್ತೆ ತಂದೆಯ ಹತ್ಯೆಯಾಯಿತು, ಚಿಕ್ಕಪ್ಪನ ಬಂಧನವಾಯಿತು. ಜನರ ತೀವ್ರ ಪ್ರತಿಭಟನೆಯ ನಂತರ 13 ತಿಂಗಳ ಬಳಿಕ ಆರೋಪಿ ಶಾಸಕನ ಬಂಧನವಾಯಿತು. ಸಂತ್ರಸ್ತೆಯ ಕುಟುಂಬವನ್ನೇ ಕೊಲ್ಲಲೆತ್ನಿಸಲಾಯಿತು. ಈಗ ಶಹಜಹಾಂಪುರ ಪ್ರಕರಣದಲ್ಲಿ ಸಂತ್ರಸ್ತೆಯನ್ನೇ ಬಂಧಿಸಲಾಗಿದೆ ಎಂದು ಟೀಕಿಸಿದ್ದಾರೆ.

ಈ ಪ್ರಕಣದಲ್ಲಿ ಆರೋಪಿಯಾದ ಬಿಜೆಪಿ ನಾಯಕನ ಮೇಲೆ ಅತ್ಯಾಚಾರ ಆರೋಪದ ಪ್ರಕರಣವನ್ನೂ ದಾಖಲಿಸಿಲ್ಲ. ಇದು, ಬಿಜೆಪಿಯ ನ್ಯಾಯ ಎಂದು ಹೇಳಿದ್ದಾರೆ. ಚಿನ್ಮಯಾನಂದ ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್‌ 376ಸಿ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಇದರ ಶಿಕ್ಷೆ ಪ್ರಮಾಣ ಅತ್ಯಾಚಾರ ಪ್ರಮಾಣಕ್ಕಿಂತಲೂ ಕಡಿಮೆಯದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.