ADVERTISEMENT

ಕೊರೊನಾ ಭೀತಿ: ಗಣೇಶ ಮೂರ್ತಿ ವಿಸರ್ಜನೆಗೆ ಹೊಸ ನಿಯಮ ವಿಧಿಸಿದ ಮುಂಬೈ ಪಾಲಿಕೆ

ಪಿಟಿಐ
Published 24 ಜುಲೈ 2020, 8:43 IST
Last Updated 24 ಜುಲೈ 2020, 8:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಗಣೇಶೋತ್ಸವದ ಸಂದರ್ಭದಲ್ಲಿ ಮನೆಗಳಲ್ಲಿ ಪೂಜಿಸಿದ ಗಣೇಶ ಮೂರ್ತಿಯ ವಿಸರ್ಜನೆ ಸಂದರ್ಭದಲ್ಲಿ ಐದಕ್ಕೂ ಹೆಚ್ಚು ಜನರು ಬರುವಂತಿಲ್ಲ ಎಂದು ಮುಂಬೈಮಹಾನಗರ ಪಾಲಿಕೆ ಸೂಚಿಸಿದೆ.

ಹತ್ತು ದಿನಗಳ ಗಣೇಶೋತ್ಸವದ ಸಂದರ್ಭದಲ್ಲಿ ಮುಂಬೈಯಲ್ಲಿ ಸಾವಿರಾರು ಸಾರ್ವಜನಿಕ ಸಂಘ– ಸಂಸ್ಥೆಗಳು ಮೂರ್ತಿ ಪ್ರತಿಷ್ಠಾಪಿಸುತ್ತವೆ. ಇದರ ಜೊತೆಗೆ ಮನೆಮನೆಗಳಲ್ಲೂ ಮೂರ್ತಿಗಳನ್ನು ತಂದು ಪೂಜಿಸಲಾಗತ್ತದೆ. ಇವುಗಳನ್ನು ಬೇರೆಬೇರೆ ದಿನಗಳಂದು ವಿಸರ್ಜನೆ ಮಾಡಲಾಗುತ್ತದೆ. ಈ ಬಾರಿ ಆಗಸ್ಟ್‌ 22ರಂದು ಗಣೇಶೋತ್ಸವ ಆರಂಭವಾಗಲಿದೆ.

ಈ ಬಾರಿ ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್‌ ಬಳಕೆ ಮುಂತಾದ ಎಚ್ಚರಿಕೆಯ ಕ್ರಮಗಳನ್ನು ಪಾಲಿಸಬೇಕು, ಕೊರೊನಾ ಸೋಂಕು ಹರಡುವಿಕೆಗೆ ಕಾರಣವಾಗಬಲ್ಲ ಯಾವುದೇ ಕೃತ್ಯ ನಡೆಸಬಾರದು. ಮನೆಗಳಲ್ಲಿ ಪೂಜಿಸಿದ ಮೂರ್ತಿಗಳ ಮೆರವಣಿಗೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕೈಬಿಡಬೇಕು. ಮೂರ್ತಿ ವಿಸರ್ಜನಾ ಸ್ಥಳಕ್ಕೆ ಮಕ್ಕಳು ಮತ್ತು ವೃದ್ಧರನ್ನು ಕರೆತರಬಾರದು. ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ 1897ರ ಸಾಂಕ್ರಾಮಿಕ ಪಿಡುಗು ಕಾಯ್ದೆ, 2005ರ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಐಪಿಸಿ ಅಡಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.

ADVERTISEMENT

ಮನೆಗಳಲ್ಲಿ ಪೂಜಿಸುವ ಗಣೇಶ ಮೂರ್ತಿಗಳು ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದವುಗಳಾಗಿರಬೇಕು ಮತ್ತು ಎರಡು ಅಡಿಗಿಂತ ಹೆಚ್ಚು ಎತ್ತರ ಇರಬಾರದು. ಇಂಥ ಮೂರ್ತಿಗಳನ್ನು ಮನೆಯಲ್ಲೇ ವಿಸರ್ಜನೆ ಮಾಡಬೇಕು. ಸಾಧ್ಯವಾಗದಿದ್ದಲ್ಲಿ ಕೃತಕ ಟ್ಯಾಂಕ್‌ಗಳಲ್ಲಿ ವಿಸರ್ಜಿಸಬಹುದು ಎಂದು ಪಾಲಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.