ನವದೆಹಲಿ: 2002ರಲ್ಲಿ ನಡೆದಗುಜರಾತ್ ನರಮೇಧದ ಕುರಿತಾಗಿ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ವಿರುದ್ಧ ಆಂದೋಲನ ನಡೆಸಿದ್ದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಹಿಂದೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇದ್ದರು ಎಂಬ ಬಿಜೆಪಿ ಆರೋಪ ಆಧಾರರಹಿತ ಎಂದು ಕಾಂಗ್ರೆಸ್ ಹೇಳಿದೆ.
‘ಬಿಜೆಪಿಯ ಈ ಆರೋಪವು ಆಧಾರರಹಿತ ಮತ್ತು ಸುಪ್ರೀಂ ಕೋರ್ಟ್ ಆದೇಶದ ನೇರ ನ್ಯಾಯಾಂಗ ನಿಂದನೆಯಾಗಿದೆ’ ಎಂದುಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ‘ಸೆಟಲ್ವಾಡ್ ಅವರು ನಡೆಸುತ್ತಿದ್ದ ಎನ್ಜಿಒಗೆ ಯುಪಿಎ ಸರ್ಕಾರ ಅದರಲ್ಲೂ ಮುಖ್ಯವಾಗಿ ಆಗಿನ ಶಿಕ್ಷಣ ಸಚಿವಾಲಯ ₹1.4 ಕೋಟಿ ನೀಡಿತ್ತು. ಈ ಹಣವನ್ನು ಮೋದಿ ಹಾಗೂ ಭಾರತಕ್ಕೆ ಅಪಮಾನವಾಗಿಸುವ ಆಂದೋಲನಕ್ಕೆ ಬಳಸಲಾಗಿತ್ತು. ಇದರಲ್ಲಿ ಸೆಟಲ್ವಾಡ್ ಅವರು ಒಬ್ಬರೇ ಇಲ್ಲ. ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವೂ ಇದೆ’ ಎಂದು ಆರೋಪಿಸಿದ್ದರು.
2002ರ ಗೋಧ್ರಾ ಹತ್ಯಾಕಾಂಡದ ನಂತರದ ಹಿಂಸಾಚಾರಗಳ ಕುರಿತು ಮೋದಿ ಹಾಗೂ ಇತರರನ್ನು ಎಸ್ಐಟಿ ದೋಷಾರೋಪ ಮುಕ್ತವಾಗಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಳ್ಳಿ ಹಾಕಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.