ಮುಂಬೈ: ಮೈಸೂರು ಹುಲಿ ಎಂದೇ ಪ್ರಖ್ಯಾತಿ ಪಡೆದ ಟಿಪ್ಪು ಸುಲ್ತಾನ್ ಜನ್ಮ ದಿನ ಆಚರಿಸದಿರಲು ಯಾವುದಾದರೂ ನಿರ್ಬಂಧವಿದೆಯೇ ಎಂದು ಮಹಾರಾಷ್ಟ್ರ ಸರ್ಕಾರವನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ.
ಟಿಪ್ಪು ಸುಲ್ತಾನ್ (1791ರ ಡಿ1–1799ರ ಮೇ4) ಬ್ರಿಟಿಷರ ವಿರುದ್ಧ ಆಂಗ್ಲೊ–ಮೈಸೂರು ಯುದ್ಧಗಳಲ್ಲಿ ಸೆಣಸಿದ್ದ ಹೋರಾಟಗಾರ. ಪ್ರಕರಣದ ಅರ್ಜಿದಾರರಾದ, ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ನ (ಎಐಎಂಐಎಂ) ಪುಣೆ ಅಧ್ಯಕ್ಷರೂ ಆದ ಫೈಯಾಜ್ ಶೇಖ್ ಅವರು, ‘ನ.26 ರಂದು ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನ, ಸಂವಿಧಾನದ ದಿನ ಹಾಗೂ ಟಿಪ್ಪು ಜನ್ಮ ದಿನ ಆಚರಿಸಲು ಅನುಮತಿ ನೀಡಿ’ ಎಂದು ಕೋರಿದ್ದರು. ಆದರೆ, ಪುಣೆ ಗ್ರಾಮಾಂತರ ಪೊಲೀಸರು ಟಿಪ್ಪು ಜನ್ಮ ದಿನ ಆಚರಣೆಗೆ ಅನುಮತಿ ನಿರಾಕರಿಸಿದ್ದರು.
ನ್ಯಾಯಮೂರ್ತಿ ರೇವತಿ ಮೋಹಿತೆ-ಡೇರೆ ಮತ್ತು ನ್ಯಾಯಮೂರ್ತಿ ಶಿವಕುಮಾರ್ ಡಿಗೆ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್ನ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸುತ್ತಿದೆ.
‘ಟಿಪ್ಪು ಸುಲ್ತಾನ್ ಜನ್ಮ ದಿನ ಆಚರಿಸಲು ನಿಷೇಧವಿದೆಯೇ? ಜನ್ಮ ದಿನಾಚರಣೆ ಸಂದರ್ಭ ಮೆರವಣಿಗೆಗೆ ಅನುಮತಿ ನೀಡದಿರಲು ಯಾವುದೇ ಕಾರಣವಿಲ್ಲ. ಆದರೆ, ಕೆಲವೊಂದು ನಿರ್ಬಂಧ ವಿಧಿಸಬಹುದು. ದುರ್ಘಟನೆ ಉಂಟಾದಲ್ಲಿ ಕ್ರಮ ಕೈಗೊಳ್ಳಬಹುದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನಿಮ್ಮ ಜವಾಬ್ದಾರಿ ಎಂದು’ ಎಂದು ಪೀಠ ಹೇಳಿದೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದ ಪುಣೆ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಪಂಕಜ್ ದೇಶಮುಖ್, ಕಳೆದ ವರ್ಷದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವೇಳೆ ಅಪರಾಧ ಘಟನೆಗಳು ನಡೆದಿವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.