ಮಾಯಾವತಿ
ಪಿಟಿಐ ಚಿತ್ರ
ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಮುಖ್ಯಸ್ಥೆ ಮಾಯಾವತಿ ಗುರುವಾರ ಬಹಿರಂಗಪಡಿಸಿದ್ದಾರೆ.
ಇಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹಿಂದಿನ ಮೈತ್ರಿಗಳಲ್ಲಿ ಪಾಲುದಾರ ಪಕ್ಷಗಳು ಮಾತ್ರ ಲಾಭ ಪಡೆದಿದ್ದವು. ಆದರೆ ಬಿಎಸ್ಪಿಗೆ ಬೆಂಬಲ ಸಿಗಲಿಲ್ಲ. ಈ ಹಿಂದಿನ ಅನುಭವದಲ್ಲಿ ಹೇಳುವುದಾದರೆ, ನಮ್ಮ ಪಕ್ಷ ಮೈತ್ರಿಯಲ್ಲಿ ಸ್ಪರ್ಧಿಸಿದಾಗ ಅದರಲ್ಲೂ ಉತ್ತರ ಪ್ರದೇಶದಲ್ಲಿ ಯಾವುದೇ ಉಪಯೋಗವಾಗಲಿಲ್ಲ. ಪಾಲುದಾರ ಪಕ್ಷಗಳಿಗೆ ನಮ್ಮ ಪಕ್ಷದ ಮತ ವರ್ಗಾವಣೆಯಾಯಿತು. ಆದರೆ ಪಾಲುದಾರ ಪಕ್ಷಗಳ ಜಾತಿ ರಾಜಕೀಯದಿಂದ ಬಿಎಸ್ಪಿಗೆ ಮತಗಳು ವರ್ಗಾವಣೆಯಾಗಲಿಲ್ಲ. ಪರಿಣಾಮವಾಗಿ, ನಮ್ಮ ಅಭ್ಯರ್ಥಿಗಳು ಕಡಿಮೆ ಸ್ಥಾನಗಳನ್ನು ಗೆಲುವು ಸಾಧಿಸಲು ಸಾಧ್ಯವಾಗುತ್ತಿತ್ತು’ ಎಂದು ಗುಡುಗಿದರು.
ಬಿಎಸ್ಪಿ ಮೈತ್ರಿಯೊಂದಿಗೆ ಸ್ಥಾಪಿಸಿದ ಯಾವ ಸರ್ಕಾರವೂ ಪೂರ್ಣಾವಧಿ ಆಡಳಿತ ನಡೆಸಲಿಲ್ಲ ಎಂದ ಮಾಯಾವತಿ, ಕೆಲವನ್ನು ಉದಾಹರಿಸಿದರು.
1993ರಲ್ಲಿ ಬಿಎಸ್ಪಿ, ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಈ ವೇಳೆ 67 ಸ್ಥಾನಗಳಲ್ಲಿ ಗೆಲುವು ಸಿಕ್ಕಿತ್ತು. 1996ರಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದಾಗಲೂ ಕೇವಲ 67 ಸೀಟುಗಳನ್ನು ಗೆಲ್ಲಲು ಸಾಧ್ಯವಾಗಿತ್ತು. 2002ರಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಿದಾಗ, ಎರಡು ಸ್ವತಂತ್ರ ಅಭ್ಯರ್ಥಿಗಳನ್ನು ಸೇರಿ 100 ಸೀಟುಗಳನ್ನು ಗೆದ್ದಿತ್ತು. ಇದು ನಮ್ಮ ಪಕ್ಷದ ಕಾರ್ಯಕರ್ತರ ಮನೋಬಲ ಹೆಚ್ಚಿಸಿತ್ತು.
2007ರಲ್ಲಿ ಸ್ಪರ್ಧಿಸಿದಾಗ ಬರೋಬ್ಬರಿ 200 ಸೀಟುಗಳನ್ನು ಗೆಲ್ಲುವ ಮೂಲಕ ಉತ್ತರ ಪ್ರದೇಶದಲ್ಲಿ ಸ್ವತಂತ್ರ ಸರ್ಕಾರ ರಚಿಸಿದ್ದೆವು, ಜತೆಗೆ ಐದು ವರ್ಷಗಳ ಕಾಲ ಸಂಪೂರ್ಣ ಆಡಳಿತ ನಡೆಸಿದ್ದೆವು. ಮೈತ್ರಿಗಳು ಬಿಎಸ್ಪಿಯನ್ನು ಬಲಪಡಿಸುವಲ್ಲಿ ವಿಫಲವಾಗಿವೆ. ಜತೆಗೆ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೂ ಅಡ್ಡಿಯಾಗಿವೆ. ಹೀಗಾಗಿ 2027ರ ಚುನಾವಣೆಯಲ್ಲಿ ಬಿಎಸ್ಪಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.