ADVERTISEMENT

ಬಿಎಸ್‌ಪಿ ಶಾಸಕರು ಸಮಾಜವಾದಿ ಪಕ್ಷ ಸೇರಲಿದ್ದಾರೆ ಎಂಬುದು ಭ್ರಮೆ: ಮಾಯಾವತಿ

ಪಿಟಿಐ
Published 16 ಜೂನ್ 2021, 9:25 IST
Last Updated 16 ಜೂನ್ 2021, 9:25 IST
ಬಿಎಸ್‌ಪಿ ವರಿಷ್ಠೆ ಮಾಯಾವತಿ
ಬಿಎಸ್‌ಪಿ ವರಿಷ್ಠೆ ಮಾಯಾವತಿ   

ಲಖನೌ: ಪಕ್ಷದಿಂದ ಅಮಾನತುಗೊಂಡ ಬಿಎಸ್‌ಪಿಯ ಐವರು ಶಾಸಕರು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿರುವ ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ವರಿಷ್ಠೆ ಮಾಯಾವತಿ, ಬಿಎಸ್‌ಪಿ ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರಲಿದ್ದಾರೆ ಎಂಬುದು ಕೇವಲ ಭ್ರಮೆಎಂದಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಯಾವತಿ, ಸಮಾಜವಾದಿ ಪಕ್ಷ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಸಮಾಜವಾದಿ ಪಕ್ಷವು ತಿರಸ್ಕಾರ ಮನೋಭಾವದ ಸಂಕುಚಿತ, ದುರುದ್ದೇಶಪೂರಿತ, ಜಾತಿವಾದ ರಾಜಕಾರಣದಲ್ಲಿ ನಿಪುಣವಾಗಿದೆ. ಹಾಗಾಗಿ ಕೆಲವು ಬಿಎಸ್‌ಪಿ ಶಾಸಕರು ಎಸ್‌ಪಿ ಸೇರುತ್ತಿದ್ದಾರೆ ಎಂದು ಮಾಧ್ಯಮದ ಮೂಲಕ ಪ್ರಚಾರ ಮಾಡುತ್ತಿದೆ. ಇದು ಕೇವಲ ಭ್ರಮೆ ಎಂದು ಉತ್ತರಿಸಿದ್ದಾರೆ.

ಎಸ್‌ಪಿ ಹಾಗೂ ಉದ್ಯಮಿ ಜೊತೆ ಒಪ್ಪಂದ ಮಾಡಿಕೊಂಡು ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ದಲಿತ ಅಭ್ಯರ್ಥಿಯನ್ನು ಸೋಲಿಸಿದ್ದಕ್ಕಾಗಿ ಶಾಸಕರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಮಾಯಾವತಿ ತಿಳಿಸಿದ್ದಾರೆ.

ಈ ಅಮಾನತುಗೊಂಡ ಶಾಸಕರ ಬಗ್ಗೆ ಎಸ್‌ಪಿ ಅಲ್ಪ ಪ್ರಾಮಾಣಿಕತೆಯನ್ನು ಹೊಂದಿದ್ದರೆ ಅವರನ್ನು ದೂರವಿರಿಸುತ್ತಿರಲಿಲ್ಲ. ಈ ಶಾಸಕರು ತಮ್ಮ ಪಕ್ಷಕ್ಕೆ ಸೇರಿಕೊಂಡರೆ ಆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಲಿದೆ ಎಂಬುದು ತಿಳಿದಿದೆ. ಅಲ್ಲದೆ ಅಲ್ಲಿನ ನಾಯಕರು ಬಿಎಸ್‌ಪಿಗೆ ಸೇರಲು ಉತ್ಸುಕರಾಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಮಂಗಳವಾರದಂದು ಐವರು ಶಾಸಕರನ್ನು ಅಮಾನತುಗೊಳಿಸಲಾಗಿತ್ತು. ಇವರೆಲ್ಲರೂ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದ ಬೆನ್ನಲ್ಲೇ ಸಮಾಜವಾದಿ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಬಗ್ಗೆ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.