ನವದೆಹಲಿ: ಸಂಸತ್ನ ಬಜೆಟ್ ಅಧಿವೇಶನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ ನಡೆಯಲಿದೆ.
‘ಈ ಸಭೆಯಲ್ಲಿ ಅಧಿವೇಶನದ ಕಾರ್ಯಕಲಾಪಗಳ ಕುರಿತಾದ ಕಾರ್ಯಸೂಚಿಗಳ ಬಗ್ಗೆ ಪ್ರಧಾನಿ ಸಮಾಲೋಚನೆ ನಡೆಸಲಿದ್ದಾರೆ. ವರ್ಚುವಲ್ ವ್ಯವಸ್ಥೆಯಲ್ಲಿ ಈ ಸಭೆ ನಡೆಯಲಿದ್ದು, ಎಲ್ಲ ಪಕ್ಷಗಳ ಸದನದ ನಾಯಕರಿಗೆ ಆಹ್ವಾನ ನೀಡಲಾಗಿದೆ. ವಿರೋಧ ಪಕ್ಷಗಳ ಸಲಹೆಗಳನ್ನು ಪ್ರಧಾನಿಆಲಿಸಲಿದ್ದಾರೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಬುಧವಾರ ತಿಳಿಸಿದ್ದಾರೆ.
ಪ್ರತಿ ಬಾರಿ ಸಂಸತ್ ಅಧಿವೇಶನಕ್ಕೆ ಮುನ್ನ ಸುಗಮ ಕಾರ್ಯಕಲಾಪ ನಡೆಸುವ ನಿಟ್ಟಿನಲ್ಲಿ ಸರ್ವಪಕ್ಷಗಳ ಸಭೆ ನಡೆಸುವುದು ಸಂಪ್ರದಾಯವಾಗಿದೆ. ಆದರೆ, ಈ ಬಾರಿ ಅಧಿವೇಶನ ಆರಂಭವಾದ ಒಂದು ದಿನದ ಬಳಿಕ ಈ ಸಭೆ ಕರೆಯಲಾಗಿದೆ.
ಜನವರಿ 29ರಂದೇ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ ಫೆಬ್ರುವರಿ 15ಕ್ಕೆ ಮುಗಿಯಲಿದೆ. ಎರಡನೇ ಹಂತದಲ್ಲಿ ಮಾರ್ಚ್ 8ರಂದು ಅಧಿವೇಶನ ಆರಂಭವಾಗಿ ಏಪ್ರಿಲ್ 8ಕ್ಕೆ ಕೊನೆಗೊಳ್ಳಲಿದೆ.
ಲೋಕಸಭೆ ಮತ್ತು ರಾಜ್ಯಸಭೆಯ ಕಾರ್ಯಕಲಾಪಗಳು ಎರಡು ಪಾಳಿಯಲ್ಲಿ ನಡೆಯಲಿವೆ. ರಾಜ್ಯಸಭೆ ಕಾರ್ಯಕಲಾಪ ಬೆಳಿಗ್ಗೆ ನಡೆಯಲಿದ್ದು, ಲೋಕಸಭೆ ಕಾರ್ಯಕಲಾಪ ಸಂಜೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.