ADVERTISEMENT

ಬುಲಂದ್‌ಶಹರ್‌ ಹಿಂಸಾಚಾರ: ಪರಿಹಾರವೇ ವಿವಾದ!

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 19:32 IST
Last Updated 6 ಡಿಸೆಂಬರ್ 2018, 19:32 IST

ಲಖನೌ:ಬುಲಂ‌ದ್‌ಶಹರ್‌ನಲ್ಲಿ ಸೋಮವಾರ ನಡೆದ ಗಲಭೆಯಲ್ಲಿ ಮೃತಪಟ್ಟ ಯುವಕನಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಮೃತಪಟ್ಟ ಯುವಕ ಸುಮಿತ್‌ ಕುಮಾರ್‌ ಚಿಂಗರಾವಟಿ ಪೊಲೀಸ್‌ ಹೊರ ಠಾಣೆ ಆವರಣದಲ್ಲಿ ಇತರರೊಂದಿಗೆ ಪೊಲೀಸರ ಮೇಲೆ ಕಲ್ಲು ಎಸೆದಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದಾನೆ.

‘ಅಪರಾಧ ಎಸಗಿದವನಿಗೆ ಸರ್ಕಾರ ಪರಿಹಾರ ಹೇಗೆ ಕೊಡುತ್ತದೆ’ ಎಂದು ಸಮಾಜವಾದಿ ಪಕ್ಷದ ಮುಖಂಡೊಬ್ಬರು ಪ್ರಶ್ನಿಸಿದ್ದಾರೆ.

ADVERTISEMENT

ಬಿಜೆಪಿ ಶಾಸಕ ಸಂಗೀತ್‌ ಸೋಮ್‌ ಅವರು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ‘2015ರಲ್ಲಿ ದಾದ್ರಿಯಲ್ಲಿ ಗೋ ಹತ್ಯೆ ಮಾಡಿರುವ ಶಂಕೆಯ ಮೇಲೆ ಅಖ್ಲಾಕ್‌ ಅವರನ್ನು ಗುಂಪೊಂದು ಹತ್ಯೆ ಮಾಡಿದಾಗ ಪರಿಹಾರ ನೀಡಿಲ್ಲವೇ? ಹಾಗೆಯೇ ಸುಮಿತ್‌ಗೂ ಪರಿಹಾರ ನೀಡಿದರೆ ತಪ್ಪೇನು’ ಎಂದು ಅವರು ಪ್ರಶ್ನಿಸಿದ್ದಾರೆ.

ಎಸ್‌ಐಟಿ ತನಿಖೆ ಆರಂಭ

ಲಖನೌ (ಪಿಟಿಐ): ಬುಲಂದ್‌ಶಹರ್‌ ಹಿಂಸಾಚಾರ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಸಹಾಯ ಮಾಡಲಿದೆ ಎಂದು ಪೊಲೀಸ್‌ ಮಹಾನಿರೀಕ್ಷಕ (ಅಪರಾಧ) ಎಸ್‌.ಕೆ.ಭಗತ್‌ ತಿಳಿಸಿದ್ದಾರೆ.

‘ಮೀರಠ್‌ ವಿಭಾಗದ ಪೊಲೀಸ್‌ ಮಹಾನಿರೀಕ್ಷಕ ನೇತೃತ್ವದ ನಾಲ್ವರು ಅಧಿಕಾರಿಗಳ ಎಸ್‌ಐಟಿ ತಂಡ ತನಿಖೆ ಆರಂಭಿಸಿದೆ. ಘಟನಾವಳಿಗಳ ವಿಡಿಯೊ ತುಣುಕುಗಳನ್ನು ತಂಡ ಪರಿಶೀಲಿಸಲಿದೆ’ ಎಂದ ಅವರು ತಿಳಿಸಿದ್ದಾರೆ.

ಮುಖ್ಯ ಆರೋಪಿ, ಬಜರಂಗ ದಳದ ಬುಲಂದ್‌ಶಹರ್‌ ಘಟಕದ ಸಂಚಾಲಕ ಯೋಗೇಶ್‌ ರಾಜ್‌ ಹೆಸರು ಎಫ್‌ಐಆರ್‌ನಲ್ಲಿದೆ. ಘಟನೆಯಲ್ಲಿ ಅವರ ಪಾತ್ರದ ಬಗ್ಗೆ ಎಸ್‌ಐಟಿ ಖಚಿತಪಡಿಸಲಿದೆ ಎಂದು ಹೇಳಿದ್ದಾರೆ.

ಘಟನೆಯಲ್ಲಿ ಪೊಲೀಸ್‌ ಅಧಿಕಾರಿ ಸುಬೋಧ್‌ ಕುಮಾರ್‌ ಹಾಗೂ ಯುವಕನೊಬ್ಬ ಪಾಯಿಂಟ್‌ 32 ಎಂ.ಎಂ. ಬಂದೂಕಿನ ಗುಂಡುಗಳಿಂದ ಮೃತಪಟ್ಟಿದ್ದಾರೆ. ಇವರಿಬ್ಬರ ಮೇಲೂಒಂದೇ ಬಂದೂಕಿನಿಂದ ಗುಂಡು ಹಾರಿಸಲಾಗಿದೆಯೇ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.