ADVERTISEMENT

ನೊಯ್ಡಾದಲ್ಲಿ ಬಿಜೆಪಿ ಮುಖಂಡನ ಒತ್ತುವರಿ ಕಟ್ಟಡ ಬುಲ್ಡೊಜರ್‌ ಬಳಸಿ ತೆರವು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 12:40 IST
Last Updated 8 ಆಗಸ್ಟ್ 2022, 12:40 IST
ನೊಯ್ಡಾದಲ್ಲಿ  ಸೋಮವಾರ ಅಕ್ರಮ ಕಟ್ಟಡವನ್ನು ಬುಲ್ಡೋಜರ್‌ ಬಳಸಿ ನೆಲಸಮಗೊಳಿಸಲಾಯಿತು   –ಪಿಟಿಐ ಚಿತ್ರ
ನೊಯ್ಡಾದಲ್ಲಿ  ಸೋಮವಾರ ಅಕ್ರಮ ಕಟ್ಟಡವನ್ನು ಬುಲ್ಡೋಜರ್‌ ಬಳಸಿ ನೆಲಸಮಗೊಳಿಸಲಾಯಿತು   –ಪಿಟಿಐ ಚಿತ್ರ   

ನೊಯ್ಡಾ:ತಲೆಮರೆಸಿಕೊಂಡಿರುವ ಬಿಜೆಪಿ ಮುಖಂಡ ಎಂದು ಹೇಳಿಕೊಳ್ಳುವ ಶ್ರೀಕಾಂತ್‌ ತ್ಯಾಗಿ ಅವರು ಒತ್ತುವರಿ ಮಾಡಿರುವ ನೊಯ್ಡಾ ನಿವಾಸದ ಜಾಗವನ್ನುಉತ್ತರ ಪ್ರದೇಶದ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಬುಲ್ಡೋಜರ್ ಬಳಸಿ ತೆರವುಗೊಳಿಸಿದರು.

ನೊಯ್ಡಾ ಪ್ರಾಧಿಕಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಾರ್ಯಾಚರಣೆ ನಡೆಸಿ, ನಗರದ ಸೆಕ್ಟರ್ 93ಬಿಯಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿರುವ ತ್ಯಾಗಿ ಅವರ ನೆಲ ಮಹಡಿ ಅಪಾರ್ಟ್‌ಮೆಂಟ್‌ನ ಹೊರಗಿನ ಅಕ್ರಮ ಕಟ್ಟಡಗಳನ್ನು ಕೆಡವಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ತ್ಯಾಗಿ ತಮ್ಮ ಫ್ಲ್ಯಾಟ್‌ ಮುಂಭಾಗ ಪ್ರದೇಶದ ಒಂದು ಭಾಗದಲ್ಲಿ ಪಿಲ್ಲರ್‌ಗಳು ಮತ್ತು ಟೈಲ್ಸ್‌ಗಳನ್ನು ಬಳಸಿ ತಾತ್ಕಾಲಿಕ ಕಟ್ಟಡ ನಿರ್ಮಿಸಿ, ಒತ್ತುವರಿ ಮಾಡಿದ್ದರು. ತಮ್ಮ ನಿವಾಸದ ಎದುರಿನ ಉದ್ಯಾನದಲ್ಲೂ ಗಿಡಗಳನ್ನು ನೆಟ್ಟಿದ್ದರು.

ADVERTISEMENT

ಮರಗಳನ್ನು ನೆಡುವುದನ್ನು ವಿರೋಧಿಸಿದ ಗ್ರ್ಯಾಂಡ್ ಓಮ್ಯಾಕ್ಸ್‌ನ ಸಹ ನಿವಾಸಿ ಮಹಿಳೆ ಮೇಲೆ ಹಲ್ಲೆ ಮತ್ತು ನಿಂದನೆ ಮಾಡಿದ ಆರೋಪದ ಮೇಲೆ ತ್ಯಾಗಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಾಂಗ್ರೆಸ್ ಟೀಕೆ:ಶ್ರೀಕಾಂತ್‌ ತ್ಯಾಗಿ ವಿರುದ್ಧ ನೊಯ್ಡಾದಲ್ಲಿ ನಡೆದ ಬುಲ್ಡೋಜರ್‌ ದಾಳಿ ಕೇವಲ ಪ್ರದರ್ಶನಕ್ಕೆ ಮಾತ್ರ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಇಷ್ಟು ವರ್ಷಗಳ ಕಾಲ ಬಿಜೆಪಿ ಸರ್ಕಾರಕ್ಕೆ ಈ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಿರುವ ಬಗ್ಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

‘ಬುಲ್ಡೊಜರ್‌ ಕ್ರಮ ಪ್ರದರ್ಶನಕ್ಕಾಗಿ ಮಾತ್ರ. ಈ ಪ್ರಶ್ನೆಗಳಿಗೆ ಉತ್ತರ ನೀಡುವುದರಿಂದ ಸರ್ಕಾರ ತಪ್ಪಿಸಿಕೊಳ್ಳುತ್ತಿದೆ’ ಎಂದು ಪ್ರಿಯಾಂಕಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಶ್ರೀಕಾಂತ್ ತ್ಯಾಗಿಗೆ ಸಂಬಂಧಿಸಿದ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಠಾಣೆಯ ಪ್ರಭಾರಿ ಪೊಲೀಸ್, ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್ ಮತ್ತು ನಾಲ್ವರು ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಮಹಿಳೆ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ತ್ಯಾಗಿ ಬಂಧನಕ್ಕೆ ಪ್ರಯತ್ನಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.