ADVERTISEMENT

ವಂಚನೆ ಪ್ರಕರಣ: ಹೈಕೋರ್ಟ್ ಮೊರೆ ಹೋದ ಪ್ರಿಯಾಂಕಾ ಕಾರ್ಯದರ್ಶಿ

ಪಿಟಿಐ
Published 12 ಜೂನ್ 2020, 11:07 IST
Last Updated 12 ಜೂನ್ 2020, 11:07 IST
ವಲಸೆ ಕಾರ್ಮಿಕರನ್ನು ಕರೆತರಲು ಕಾಂಗ್ರೆಸ್ ಪಕ್ಷ ನಿಯೋಜಿಸಿದ್ದ ಬಸ್‌ಗಳನ್ನು ಉತ್ತರ ಪ್ರದೇಶ–ರಾಜಸ್ಥಾನ ಗಡಿ ರಸ್ತೆ ಬದಿಯಲ್ಲಿ ಸಾಲಾಗಿ ನಿಲ್ಲಿಸಲಾಗಿತ್ತು–ಪಿಟಿಐ ಚಿತ್ರ
ವಲಸೆ ಕಾರ್ಮಿಕರನ್ನು ಕರೆತರಲು ಕಾಂಗ್ರೆಸ್ ಪಕ್ಷ ನಿಯೋಜಿಸಿದ್ದ ಬಸ್‌ಗಳನ್ನು ಉತ್ತರ ಪ್ರದೇಶ–ರಾಜಸ್ಥಾನ ಗಡಿ ರಸ್ತೆ ಬದಿಯಲ್ಲಿ ಸಾಲಾಗಿ ನಿಲ್ಲಿಸಲಾಗಿತ್ತು–ಪಿಟಿಐ ಚಿತ್ರ   

ಲಖನೌ: ವಲಸೆ ಕಾರ್ಮಿಕರನ್ನು ವಾಪಸ್ ಕಳುಹಿಸಲು 1,000 ಬಸ್‌ಗಳನ್ನು ಒದಗಿಸುವ ವಿಚಾರದಲ್ಲಿ ವಂಚನೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಆಪ್ತ ಕಾರ್ಯದರ್ಶಿ ಸಂದೀಪ್ ಸಿಂಗ್ ಅವರು ನಿರೀಕ್ಷಣಾ ಜಾಮೀನು ಕೋರಿ ಶುಕ್ರವಾರ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು, ಸಂದೀಪ್ ಸಿಂಗ್ ಹಾಗೂ ಇತರರ ವಿರುದ್ಧ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಮೇ 19ರಂದು ವಂಚನೆ ಹಾಗೂ ದಾಖಲೆ ತಿರುಚಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ‘ಕಾಂಗ್ರೆಸ್ ಪಟ್ಟಿಯಲ್ಲಿದ್ದ 100 ವಾಹನಗಳು ಬಸ್‌ಗಳಲ್ಲ. 297 ವಾಹನಗಳಿಗೆ ಸಾಮರ್ಥ್ಯ ಪ್ರಮಾಣ ಪತ್ರ ಅಥವಾ ವಾಹನ ವಿಮೆ ಇಲ್ಲ’ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿತ್ತು. ಆದರೆ ಈ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿತ್ತು.

ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರು, ಪ್ರಕರಣದ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದರು.

ADVERTISEMENT

‘ಪ್ರಕರಣದಲ್ಲಿ ಯಾವುದೇ ಅಪರಾಧದ ಸ್ವರೂಪ ಇಲ್ಲ. ಮೇಲಾಗಿ ಇದು ರಾಜಕೀಯ ಪಿತೂರಿಯಿಂದ ದಾಖಲಿಸಿದ ದೂರು’ ಎಂದು ಸಂದೀಪ್ ಪರ ವಕೀಲ ಜೆ.ಎನ್. ಮಾಥುರ್ ವಾದ ಮಂಡಿಸಿದರು. ಕಾಂಗ್ರೆಸ್ ನೀಡಿದ್ದ ಸಾವಿರ ಬಸ್‌ಗಳ ಪಟ್ಟಿಯಲ್ಲಿ ಕಾರು, ಟ್ರಕ್ ಹಾಗೂ, ಆಟೊರಿಕ್ಷಾಗಳ ನೋಂದಣಿ ಸಂಖ್ಯೆ ಇದ್ದುದು ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ಸರ್ಕಾರದ ನಡುವೆ ವಾಕ್ಸಮರ ನಡೆದಿತ್ತು.‌

ರಾಜಸ್ಥಾನ–ಉತ್ತರ ಪ್ರದೇಶ ಗಡಿಯಲ್ಲಿ ಪೊಲೀಸರ ಜತೆ ವಾಗ್ವಾದ ನಡೆಸಿದ್ದ ಲಲ್ಲು ಹಾಗೂ ಕಾರ್ಯಕರ್ತರು ಧರಣಿಯನ್ನೂ ನಡೆಸಿದ್ದರು. ಈ ವೇಳೆ ಲಲ್ಲು ಅವರನ್ನು ಬಂಧಿಸಲಾಗಿತ್ತು. ಅವರು ಜಾಮೀನಿನ ಮೇಲೆ ಹೊರಬಂದಿದ್ದರು. ಆದರೆ ವಂಚನೆ ಪ್ರಕರಣದಲ್ಲಿ ಅವರನ್ನು ಲಖನೌ ಪೊಲೀಸರು ಮತ್ತೆ ಬಂಧಿಸಿದ್ದಾರೆ.

ಗಡಿಯಲ್ಲಿ ಅಪಾರ ನಿರೀಕ್ಷೆಯಿಂದ ಕಾದಿದ್ದ ಕಾರ್ಮಿಕರಿಗೆ ಸಾವಿರ ಬಸ್ ಕಳುಹಿಸುವುದಾಗಿ ಪ್ರಿಯಾಂಕಾ ಗಾಂಧಿ ಸರ್ಕಾರದ ಮುಂದೆ ಪ್ರಸ್ತಾವ ಇರಿಸಿದ್ದರು. ವಾಹನಗಳ ಸಂಖ್ಯೆ, ಚಾಲಕರು ಮೊದಲಾದ ಮಾಹಿತಿ ಒದಗಿಸುವಂತೆ ಕೇಳಿದ್ದ ಸರ್ಕಾರ, ಆರಂಭದಲ್ಲಿ ಪ್ರಸ್ತಾವವನ್ನು ಒಪ್ಪಿತ್ತು. ಬಸ್‌ಗಳನ್ನು ಮೊದಲು ಲಖನೌಗೆ ಕಳುಹಿಸಲು ತಿಳಿಸಿತ್ತು. ಇದನ್ನು ಟೀಕಿಸಿದ್ದ ಸಂದೀಪ್, ‘ಗಡಿಯಲ್ಲಿ ಸಾವಿರಾರು ವಲಸಿಗರು ರಾಜ್ಯ ಪ್ರವೇಶಿಸಲು ಹಾತೊರೆಯುತ್ತಿರುವಾಗ, ಸರ್ಕಾರವು ಬಸ್‌ಗಳನ್ನು ಲಖನೌಗೆ ಕಳುಹಿಸಲು ಸೂಚಿಸಿರುವುದು ಅಮಾನವೀಯ’ ಎಂದು ಆರೋಪಿಸಿದ್ದರು. ಗಡಿಗೆ ತೆರಳಿದ್ದ ಬಸ್‌ಗಳು,ಕಾರ್ಮಿಕರನ್ನು ಕರೆತರದೇ ವಾಪಸಾಗಿದ್ದವು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.