ADVERTISEMENT

ದೆಹಲಿ CAA ಹಿಂಸಾಚಾರ: ಗುಪ್ತ ದಳದ ಸಿಬ್ಬಂದಿಯ ಶವ ಚರಂಡಿಯಲ್ಲಿ ಪತ್ತೆ

ಏಜೆನ್ಸೀಸ್
Published 26 ಫೆಬ್ರುವರಿ 2020, 9:23 IST
Last Updated 26 ಫೆಬ್ರುವರಿ 2020, 9:23 IST
ಅಂಕಿತ್ ಶರ್ಮಾ ಕುಟುಂಬಿಕರ ರೋದನ (ಟ್ವಿಟರ್ ಖಾತೆ ಕೃಪೆ)
ಅಂಕಿತ್ ಶರ್ಮಾ ಕುಟುಂಬಿಕರ ರೋದನ (ಟ್ವಿಟರ್ ಖಾತೆ ಕೃಪೆ)   

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರ 20 ಮಂದಿಯನ್ನು ಬಲಿತೆಗೆದುಕೊಂಡಿರುವಂತೆಯೇ, ಆಘಾತಕಾರಿ ಚಿತ್ರಣಗಳೂ ಒಂದೊಂದಾಗಿ ಬೆಳಕಿಗೆ ಬರಲಾರಂಭಿಸಿವೆ. ಚಾಂದ್ ಬಾಗ್ ಪ್ರದೇಶದ ಚರಂಡಿಯೊಂದರಲ್ಲಿ ಗುಪ್ತಚರ ಇಲಾಖೆಯ ಸಿಬ್ಬಂದಿಯೊಬ್ಬರ ಶವ ಪತ್ತೆಯಾಗಿದ್ದು, ದ್ವೇಷದ ತೀವ್ರತೆಗೆ ಸಾಕ್ಷಿಯಾಗಿದೆ.

ದಾಳಿಗೆ ತುತ್ತಾದ ವ್ಯಕ್ತಿಯನ್ನು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ 26ರ ಹರೆಯದ ಅಂಕಿತ್ ಶರ್ಮಾ ಎಂದು ಗುರುತಿಸಲಾಗಿದೆ. ಗುಂಪೊಂದು ಅವರ ಮೇಲೆ ಮುಗಿಬಿದ್ದು ಎಳೆದಾಡಿ, ಗುಂಡಿಕ್ಕಿ ಸಾಯಿಸಿದ್ದಾರೆ ಮತ್ತು ಚರಂಡಿಗೆ ಎತ್ತಿ ಎಸೆದಿದ್ದಾರೆ.

ಬುಧವಾರ ಬೆಳಗ್ಗೆ ಅವರ ಶವವನ್ನು ಮೇಲಕ್ಕೆತ್ತಲಾಗಿದೆ. ಗುಪ್ತಚರ ಮಂಡಳಿಯಲ್ಲಿ ತರಬೇತಿಗೆ ನಿಯುಕ್ತರಾಗಿದ್ದ ಯುವ ಅಧಿಕಾರಿ ಅಂಕಿತ್ ಶರ್ಮಾ ಅವರ ದೇಹದಲ್ಲಿ ಗುಂಡೇಟಿನ ಗಾಯವಿದೆ. ಮರಣೋತ್ತರ ಪರೀಕ್ಷೆಗಾಗಿ ಗುರು ತೇಗ್ ಬಹಾದೂರ್ (ಜಿಟಿಬಿ) ಆಸ್ಪತ್ರೆಗೆ ಒಯ್ಯಲಾಗಿದೆ. 2017ರಲ್ಲಿ ಅವರು ಕರ್ತವ್ಯಕ್ಕೆ ಸೇರಿದ್ದರು.

ADVERTISEMENT

ಖಜೂರಿ ಖಾಸ್ ಪ್ರದೇಶದಲ್ಲಿ ಅವರ ಮನೆಯಿದ್ದು, ಮಂಗಳವಾರ ಸಂಜೆಯಿಂದ ಅವರು ನಾಪತ್ತೆಯಾಗಿರುವುದಾಗಿ ಕುಟುಂಬಿಕರು ಹೇಳಿದ್ದರು. ಬುಧವಾರ ಮಧ್ಯಾಹ್ನ ಅವರ ಶವ ದೊರೆತಿದೆ. ಜನರ ಗುಂಪೊಂದು ತಮ್ಮ ಮನೆಯಿರುವ ಬೀದಿಗೆ ಧಾವಿಸಿ ಬಂದು ಕಲ್ಲು ತೂರಾಟ ನಡೆಸಲಾರಂಭಿಸಿದ್ದರು. ಮನೆಯವರು ಅಂಕಿತ್‌ಗೆ ಕರೆ ಮಾಡಿ, ರಕ್ಷಣೆಗಾಗಿ ತಕ್ಷಣ ಬರುವಂತೆ ಹೇಳಿದ್ದರು. ಓಡೋಡಿ ಬಂದರೂ, ಮನೆಯ ಸಮೀಪ ಬಂದಾಗ ಈ ಗುಂಪು ತಡೆದು ನಿಲ್ಲಿಸಿತು. ಅಂಕಿತ್‌ಗೆ ಥಳಿಸಿದ ಈ ಗುಂಪು ಅವರನ್ನು ಎಳೆದೊಯ್ದಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬುಧವಾರ ಶವ ಪತ್ತೆಯಾದ ಬಳಿಕ ಅವರನ್ನು ಗುರುತಿಸುವಂತೆ ಕುಟುಂಬಿಕರಿಗೆ ಹೇಳಲಾಯಿತು. ಅಂಕಿತ್ ಅವರ ತಂದೆ ದೇವೇಂದ್ರ ಶರ್ಮಾ ಕೂಡ ಐಬಿಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿದ್ದಾರೆ. ಅವರು ಹೇಳುವ ಪ್ರಕಾರ, ಅಂಕಿತ್‌ಗೆ ಚೆನ್ನಾಗಿ ಥಳಿಸಿ ಬಳಿಕ ಗುಂಡು ಹಾರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.