ADVERTISEMENT

ಸಿಎಎ ಶೀಘ್ರ ಜಾರಿಗೆ ಕ್ರಮ, ವಿಳಂಬಕ್ಕೆ ಕೊರೊನಾ ಕಾರಣ: ಜೆ.ಪಿ.ನಡ್ಡಾ

ಪಿಟಿಐ
Published 19 ಅಕ್ಟೋಬರ್ 2020, 15:37 IST
Last Updated 19 ಅಕ್ಟೋಬರ್ 2020, 15:37 IST
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ   

ಸಿಲಿಗುರಿ: ಕೋವಿಡ್-19 ಕಾರಣದಿಂದಾಗಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಜಾರಿಗೊಳಿಸುವುದು ವಿಳಂಬವಾಗಿದ್ದು, ಶೀಘ್ರದಲ್ಲೇ ಈ ಕಾನೂನು ಜಾರಿಗೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೋಮವಾರ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಸಿಎಎ ಅನುಷ್ಠಾನಕ್ಕೆ ಪಕ್ಷವು ಬದ್ಧವಾಗಿದ್ದು, ಎಲ್ಲರಿಗೂ ಇದರ ಲಾಭ ದೊರಕಲಿದೆ ಎಂದು ತಿಳಿಸಿದ್ದಾರೆ.

2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷದ ಸಂಘಟನಾತ್ಮಕ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲು ಸಿಲಿಗುರಿಗೆ ಭೇಟಿ ನೀಡಿದ್ದ ನಡ್ಡಾ, ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದರು.
ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ, ತನ್ನ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ರಾಜ್ಯದಲ್ಲಿ 'ಒಡೆದು ಆಳುವ ನೀತಿಯನ್ನು' ಅನುಸರಿಸುತ್ತಿದೆ. ಆದರೆ ಬಿಜೆಪಿ ಮಾತ್ರ ಎಲ್ಲರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ ಎಂದರು.

ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳನ್ನು ರೂಪಿಸಲು ಇನ್ನೂ ಮೂರು ತಿಂಗಳುಗಳು ಬೇಕಾಗುತ್ತವೆ ಎಂದು ಗೃಹ ಸಚಿವಾಲಯವು ಆಗಸ್ಟ್‌ನಲ್ಲಿ ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿತ್ತು. ಸಂಸತ್ತು ಅಂಗೀಕರಿಸಿದ ನಂತರ ಅಧಿಸೂಚನೆ ಹೊರಡಿಸಿದರೂ, ನಿಯಮಗಳ ಕೊರತೆಯಿಂದಾಗಿ ಸಿಎಎ ಅನುಷ್ಠಾನವನ್ನು ತಡೆಹಿಡಿಯಲಾಗಿದೆ.

ಕಳೆದ ವರ್ಷ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಕಾರ, 2014ರ ಡಿಸೆಂಬರ್ 14ಕ್ಕೂ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಬಂದಿರುವ ಮುಸ್ಲಿಮೇತರ ಹಿಂದೂ, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧ, ಜೈನರು ಮತ್ತು ಪಾರ್ಸಿಗಳಿಗೆ ಭಾರತದ ಪೌರತ್ವ ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.