ನನವದೆಹಲಿ ರೈಲು ನಿಲ್ದಾಣದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣ
ಪಿಟಿಐ ಚಿತ್ರ
ನವದೆಹಲಿ: ‘ಪ್ರಯಾಗ್ರಾಜ್ಗೆ ತೆರಳುವ ರೈಲು ಬರುತ್ತಿದ್ದಂತೆ ಪ್ಲಾಟ್ಫಾರ್ಮ್ಗಳಲ್ಲಿ ಜನಸಂದಣಿ ಹೆಚ್ಚಾಯಿತು. ನಿಲ್ದಾಣದ ಮೇಲ್ಸೇತುವೆ ಮೇಲೆಯೂ ಭಾರಿ ಜನರು ಸೇರಿದ್ದರು. ಈ ವೇಳೆ ಹಲವರು ಉಸಿರುಗಟ್ಟಿ ಅಲ್ಲಿಯೇ ಬಿದ್ದಿದ್ದರು. ಸ್ಥಳದಲ್ಲೇ 10ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು. ನಾವು ಪ್ಲಾಟ್ಫಾರ್ಮ್ ಸಂಖ್ಯೆ 14 ಮತ್ತು 15 ರಿಂದ ಮೃತ ದೇಹಗಳನ್ನು ಆಂಬ್ಯುಲೆನ್ಸ್ಗೆ ಸಾಗಿಸಿದ್ದೇವೆ. ಅವ್ಯವಸ್ಥೆಯ ನಡುವೆ ಕೈಗಾಡಿಗಳಲ್ಲೇ ಶವಗಳನ್ನು ಸಾಗಿಸಿದೆವು’ ಎಂದು ರೈಲು ನಿಲ್ದಾಣದಲ್ಲಿ ಕೆಲಸ ಮಾಡುವ ಕೂಲಿಗಳು ಘಟನೆಯ ಬಗ್ಗೆ ವಿವರಿಸಿದ್ದಾರೆ.
ಜನಸಂದಣಿಯಲ್ಲಿ ಸಿಲಕಿದ್ದ ಜನರು ಹೊರಬರಲಾರದೆ, ಉಸಿರಾಡಲು ಸಾಧ್ಯವಾಗದೆ ಹೆಣಗಾಡುತ್ತಿದ್ದರು ಎಂದು ಪ್ರತ್ಯಕ್ಷವಾಗಿ ಕಂಡ ಕೂಲಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಕಾಲ್ತುಳಿತದ ಭೀಕರ ದೃಶ್ಯವನ್ನು ನೆನಪಿಸಿಕೊಂಡ ಕೂಲಿ ಬಲರಾಮ್, ‘ಸಾಮಾನು, ವಸ್ತುಗಳನ್ನು ಸಾಗಿಸುವ ಕೈಗಾಡಿಗಳಲ್ಲಿ ಹೆಣಗಳನ್ನು ಸಾಗಿಸಿದ್ದೇವೆ, ಕಳೆದ 15 ವರ್ಷಗಳಿಂದ ಇಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದೇನೆ, ಇಂತಹ ಬೃಹತ್ ಜನಸಂದಣಿಯನ್ನು ಇದುವರೆಗೆ ಕಂಡಿರಲಿಲ್ಲ’ ಎಂದಿದ್ದಾರೆ.
ಇನ್ನೊಬ್ಬರು ಮಾತನಾಡಿ, ‘ಜನರ ಚಪ್ಪಲಿ, ಬೂಟು ಸೇರಿ ಇತರ ವಸ್ತುಗಳು ಎಲ್ಲೆಡೆ ಚದುರಿಹೋಗಿದ್ದವು, ಅನೇಕ ಮಕ್ಕಳು ಮತ್ತು ಹಿರಿಯ ವ್ಯಕ್ತಿಗಳನ್ನು ಜನಸಂದಣಿಯಿಂದ ಹೊರಕ್ಕೆ ಕರೆದುಕೊಂಡು ಬಂದಿದ್ದೇವೆ’ ಎಂದು ವಿವರಿಸಿದ್ದಾರೆ.
ಕಾಲ್ತುಳಿತದ ಕಾರಣ ತಿಳಿಸಿದ ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್ಒ) ಹಿಮಾಂಶು ಉಪಾಧ್ಯಾಯ ಅವರು, ‘ಮೇಲ್ಸೇತುವೆಯಿಂದ ಪ್ಲಾಟ್ಫಾರ್ಮ್ ಸಂಖ್ಯೆ 14 ಮತ್ತು 15 ರ ಕಡೆಗೆ ಮೆಟ್ಟಿಲುಗಳನ್ನು ಬಳಸಿ ಕೆಳಗೆ ಬರುತ್ತಿದ್ದ ಕೆಲವರು ಜಾರಿ ಇತರರ ಮೇಲೆ ಬಿದ್ದಿದ್ದಾರೆ. ಇದರಿಂದ ಹಲವರು ಕಾಲ್ತುಳಿತ ಸಂಭವಿಸಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.