ADVERTISEMENT

ಆರೋಪಿ ಆದಿತ್ಯ ರಾವ್ ವಿರುದ್ಧ ಗಂಭೀರ ಪ್ರಕರಣ ದಾಖಲು: ಪೊಲೀಸ್‌ ಆಯುಕ್ತ ಹರ್ಷ

ಈ ಕೃತ್ಯದಲ್ಲಿ ಒಬ್ಬನೇ ಭಾಗಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 6:48 IST
Last Updated 23 ಜನವರಿ 2020, 6:48 IST
ಡಾ.ಪಿ.ಎಸ್ ಹರ್ಷ
ಡಾ.ಪಿ.ಎಸ್ ಹರ್ಷ   

ಮಂಗಳೂರು: ‘ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಆದಿತ್ಯ ರಾವ್ ವಿರುದ್ದ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದ್ದು, ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟು‌ಮಾಡಲು‌ ಯತ್ನಿಸಿದ್ದಾನೆ’ ಎಂದು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ತಿಳಿಸಿದರು.

ಬಿಇ ಪದವೀಧರನಾಗಿದ್ದು, ತನ್ನ ತಾಂತ್ರಿಕ ಜ್ಞಾನವನ್ನು ಬಳಸಿ, ಇಂಟರ್ ನೆಟ್ ಸಹಾಯದಿಂದ ಸ್ಫೋಟಕ ತಯಾರಿಸಿದ್ದಾನೆ. ಮಂಗಳೂರಿನಲ್ಲಿಯೇ ಸ್ಫೋಟಕ ಸಿದ್ಧಪಡಿಸುವಲ್ಲಿ‌ ನಿರತನಾಗಿದ್ದ ಆರೋಪಿ, ನಂತರ ಕಾರ್ಕಳಕ್ಕೆ ತೆರಳಿ ಅಲ್ಲಿನ ಹೋಟೆಲ್ ನಲ್ಲಿ ಕೆಲಸಕ್ಕೆ ಇದ್ದ. ಇದೇ 19 ರಂದು ಸ್ಫೋಟಕ ಸಿದ್ಧವಾಗಿದೆ ಎಂದು ಮನವರಿಕೆ ಮಾಡಿಕೊಂಡಿದ್ದ.

ನಂತರ‌ ಕಾರ್ಕಳದಿಂದ ನಗರದ ಸ್ಟೇಟ್ ಬ್ಯಾಂಕ್ ಗೆ ಬಂದಿದ್ದ ಆರೋಪಿ, ಅಲ್ಲಿಂದ ಸಿಟಿ ಬಸ್ ನಲ್ಲಿ ಕೆಂಜಾರಿಗೆ ತೆರಳಿ, ಅಲ್ಲಿ ಒಂದು ಸಲೂನ್ ಗೆ ಹೋಗಿದ್ದ. ಅಲ್ಲಿ ಒಂದು ಬಾಗ್ ಅನ್ನು ಇಟ್ಟು, ಸ್ಫೋಟಕ ಇದ್ದ ಒಂದೇ ಬ್ಯಾಗ್ ನೊಂದಿಗೆ ಅಟೋದಲ್ಲಿ‌ ವಿಮಾನ ನಿಲ್ದಾಣಕ್ಕೆ ತೆರಳಿದ್ದ. ನಂತರ ಸ್ಫೋಟಕವನ್ನು ಇರಿಸಿ, ಅಟೋದಲ್ಲಿ ಅಲ್ಲಿಂದ ತೆರಳಿದ್ದ. ಅದಾದ ನಂತರ‌ ವಿಮಾನಯಾನ ಸಂಸ್ಥೆಗೆ ಕರೆ ಮಾಡಿ, ವಿಮಾನದಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ ಹಾಕಿದ್ದ ಎಂದು ವಿವರಿಸಿದರು.

ADVERTISEMENT

ಅದಾದ ನಂತರ ಶಿರಸಿ, ಶಿವಮೊಗ್ಗದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ, ಪೊಲೀಸ್ ಕಾರ್ಯಾಚರಣೆ ತೀವ್ರವಾಗುತ್ತಿದ್ದಂತೆಯೇ ಶಿವಮೊಗ್ಗದಿಂದ ಬೆಂಗಳೂರಿಗೆ ಬಸ್ ನಲ್ಲಿ ತೆರಳಿದ್ದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದರು.

ಸ್ಫೋಟಕದ ಪ್ರಮಾಣ ಎಂಥದ್ದು‌ ಎಂಬುದು ಎಫ್ಎಸ್ಎಲ್ ವರದಿ ಬಂದ ನಂತರವೇ ಸ್ಪಷ್ಟವಾಗಲಿದೆ. ಅಲ್ಲದೇ ಈ ಕೃತ್ಯದಲ್ಲಿ ಒಬ್ಬನೇ ಇರುವ ಸಾಧ್ಯತೆ ಹೆಚ್ಚಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.