ತ್ರಿಶ್ಶೂರ್(ಕೇರಳ): ಟಿ.ವಿ. ವಾಹಿನಿ ಚರ್ಚೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಗುಂಡಿನ ದಾಳಿ ನಡೆಸಬೇಕು ಎಂದು ಹೇಳಿಕೆ ನೀಡಿದ್ದ ಕೇರಳದ ಬಿಜೆಪಿ ನಾಯಕ ಪ್ರಿಂಟು ಮಹದೇವನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶ್ರೀಕುಮಾರ್ ಸಿ.ಸಿ ಅವರು ನೀಡಿದ ದೂರಿನ ಅನ್ವಯ ಇಲ್ಲಿನ ಪೇರಾಮಂಗಲಂ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ನ ಸೆಕ್ಷನ್ 192 (ಗಲಭೆಗೆ ಪ್ರಚೋದನೆ), ಸೆಕ್ಷನ್ 353 (ಉದ್ದೇಶಪೂರ್ವಕವಾಗಿ ಶಾಂತಿಭಂಗ ಯತ್ನ) ಹಾಗೂ 351(2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹದೇವನ್ ಹೇಳಿಕೆ ಖಂಡಿಸಿ, ರಾಜ್ಯದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಸೆ.26ರಂದು ಮಲಯಾಳ ಸುದ್ದಿವಾಹಿನಿಯಲ್ಲಿ ಬಾಂಗ್ಲಾದೇಶ, ನೇಪಾಳದಲ್ಲಿ ನಡೆದ ಪ್ರತಿಭಟನೆ ಕುರಿತು ಚರ್ಚೆಯಲ್ಲಿ ಮಾತನಾಡಿದ್ದ ಮಹದೇವನ್, ‘ಭಾರತದಲ್ಲಿ ಇಂತಹ ಪ್ರತಿಭಟನೆ ನಡೆಯಲು ಸಾಧ್ಯವಿಲ್ಲ. ಜನರು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಗಟ್ಟಿಯಾಗಿ ನಿಂತಿದ್ದಾರೆ. ಒಂದೊಮ್ಮೆ ರಾಹುಲ್ ಗಾಂಧಿ ಇಂತಹ ಪ್ರತಿಭಟನೆ ನಿರೀಕ್ಷಿಸಿದ್ದರೆ, ಗುಂಡುಗಳು ಅವರ ಎದೆಯನ್ನು ಭೇದಿಸುತ್ತವೆ’ ಎಂದು ಹೇಳಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.