ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಮುಂಬರುವ ಜನಗಣತಿ ಮತ್ತು ಜಾತಿಗಣತಿಗೆ ಸಾಕಷ್ಟು ಹಣ ಹಂಚಿಕೆ ಮಾಡಿ, ಸಮಯದ ಮಿತಿಯನ್ನು ನಿಗದಿಪಡಿಸಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಜಾತಿ ಗಣತಿ ಮಾಡುವಂತೆ ಒತ್ತಾಯಿಸಿತ್ತು, ದೇಶದಾದ್ಯಂತ ಆಂದೋಲನವನ್ನೂ ನಡೆಸಿತ್ತು. ಈಗ ಬಿಜೆಪಿಯವರು ತಾವು ಅಂದುಕೊಂಡಿದ್ದನ್ನು ಸಾಧಿಸಿದ್ದೇವೆ ಎಂದು ಸಂತಸದಲ್ಲಿದ್ದಾರೆ ಎಂದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆಯೇ ಜನಗಣತಿಯೊಂದಿಗೆ ಜಾತಿ ಗಣತಿ ನಡೆಸಿ ಎಂದು ಪತ್ರ ಬರೆದಿದ್ದೆ, ಆದರೆ ಆಗ ಅವರು ಅದಕ್ಕೆ ಒಪ್ಪಿಕೊಂಡಿರಲಿಲ್ಲ. ಈಗ ಸರ್ಕಾರ ಅದೇ ನಿರ್ಧಾರ ಕೈಗೊಂಡಿದೆ. ಇದು ಒಳ್ಳೆಯ ವಿಚಾರ. ನಾವು ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ. ಆದರೆ ಬಿಜೆಪಿಯವರು ಅನಗತ್ಯವಾಗಿ ಜವಾಹರಲಾಲ್ ನೆಹರು ಅವರು ಜಾತಿಗಣತಿಯನ್ನು ವಿರೋಧಿಸಿದ್ದರು ಎನ್ನುವ ಹೇಳಿಕೆ ನೀಡಬಾರದು ಎಂದರು.
ಜನ್ ಸಂಘ್ ಮತ್ತು ಆರ್ಎಸ್ಎಸ್ ಹುಟ್ಟಿದಾಗಲಿಂದಲೂ ಮೀಸಲಾತಿಯನ್ನು ವಿರೋಧಿಸುತ್ತಲೇ ಬಂದಿದೆ. ಅಂತಹ ಜನರು ಕಾಂಗ್ರೆಸ್ ಜಾತಿ ಜನಗಣತಿಯನ್ನು ಬೆಂಬಲಿಸುವುದಿಲ್ಲ ಎಂದು ಮಾತನಾಡುತ್ತಿದ್ದಾರೆ. ನಾವು ಜಾತಿಗಣತಿಯನ್ನು ವಿರೋಧಿಸುತ್ತಿದ್ದರೆ, ಎರಡು ವರ್ಷಗಳ ಹಿಂದೆಯೇ ಪತ್ರವನ್ನೇಕೆ ಬರೆಯುತ್ತಿದ್ದೆವು? ಬಿಜೆಪಿ ಜನರ ಮನಸ್ಸಿನಲ್ಲಿ ಗೊಂದಲವನ್ನು ಹುಟ್ಟುಹಾಕುತ್ತಿದೆ, ಅವರು ಮಾತ್ರ ಜನರ ಕಲ್ಯಾಣದ ಬಗ್ಗೆ ಚಿಂತಿಸುತ್ತಾರೆ ಎನ್ನುವಂತೆ ತೋರಿಸಿಕೊಳ್ಳುತ್ತಿದೆ. ಆದರೆ ಅದು ಬೋಗಸ್, ಅದನ್ನು ನಾನು ಒಪ್ಪುವುದಿಲ್ಲ, ರಾಜಕೀಯಕ್ಕಾಗಿ ಬಿಜೆಪಿಗರು ಈ ರೀತಿ ಮಾಡುತ್ತಾರೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.